Monday, November 14, 2011

ಬುದ್ಧಿವಂತ ಮಕ್ಕಳನ್ನು ಬೆಳೆಸುವ ವಿಧಾನ ಪರಿಚಯದ ಲೇಖನ ಈ ದಿನದ ಪ್ರಜಾವಾಣಿಯಲ್ಲಿ (14/11/11)


ಮೇಧಾವಿ ಮಕ್ಕಳ ಶಿಕ್ಷಣ ಹೇಗೆ?

  • November 14, 2011



`ಶಾಲೆಯಲ್ಲಿನ ಒತ್ತಡದ ಕಲಿಕೆಯಿಂದ ನನಗೆ ದುಃಖವಾಗಿದೆ. ಅದಕ್ಕೆ ನಾನು ಏನು ಮಾಡಬೇಕು ಎಂಬುದು ಗೊತ್ತಾಗುತ್ತಿಲ್ಲ. ಏಕೆಂದರೆ ಶಾಲೆಯಲ್ಲಿ ಕಲಿಸುವ ಎಲ್ಲಾ ವಿಷಯಗಳು ನನಗೆ ತಿಳಿದಿವೆ. ನನಗೆ ಅವೆಲ್ಲಾ ಗೊತ್ತಿರುವುದರಿಂದ ಮುಂದೆ ಮುಂದೆ ಮಾತನಾಡುತ್ತೇನೆ. ಆದರೆ ಇದು ನನ್ನ ಸಹಪಾಠಿಗಳಿಗೆ ಸ್ವಲ್ಪನೂ ಇಷ್ಟವಾಗುತ್ತಿಲ್ಲ.
ಶಿಕ್ಷಕರೂ ಸಹಿಸುವುದಿಲ್ಲ. ನನಗಂತೂ ಶಾಲೆಗೆ ಹೋಗುವುದೇ ಬೇಡ ಎನಿಸುತ್ತಿದೆ` ಎಂದು 8ನೇ ತರಗತಿ ವಿದ್ಯಾರ್ಥಿನಿ ಕುಸುಮ ಹೇಳುವುದನ್ನು ಕೇಳಿದರೆ, ಆಕೆಯಲ್ಲಿನ ಪ್ರತಿಭೆಯನ್ನು ಹತ್ತಿಕ್ಕಲಾಗುತ್ತಿದೆಯೇ ಎನಿಸುತ್ತದೆ.
ಈ ತರಹದ ಸಮಸ್ಯೆಗಳನ್ನು ಪ್ರತಿಭಾನ್ವಿತರಿರುವ ಕುಟುಂಬಗಳಲ್ಲಿ ಸಾಮಾನ್ಯವಾಗಿ ಕಾಣುತ್ತೇವೆ. ಆ ಮಕ್ಕಳು ತಮ್ಮ ವಯಸ್ಸಿನಲ್ಲಿ ಇತರೆ ಮಕ್ಕಳಿಗಿಂತ ಹೆಚ್ಚಿನ ಬುದ್ಧಿಮಟ್ಟವನ್ನು ತೋರಿಸುತ್ತಿರುತ್ತಾರೆ. ಈ ಪ್ರತಿಭೆಗಳು ಹೆಚ್ಚಿನ ರೀತಿಯಲ್ಲಿ ಅರಳದಿರಲು ಪಾಲಕರಲ್ಲಿನ ಎರಡು ಮುಖ್ಯ ಕೊರತೆಗಳು ಕಾರಣ ಎಂದು ಹೇಳಬಹುದು.
ಮೊದಲನೆಯದಾಗಿ ಪ್ರತಿಭಾನ್ವಿತ ಮಗುವಿನ ಬೆಳವಣಿಗೆಯನ್ನು ಅರಿಯುವ ಜ್ಞಾನ ಅವರಲ್ಲಿ ಇಲ್ಲದಿರುವುದು ಹಾಗೂ ಮಗು ಆ ನಿಟ್ಟಿನಲ್ಲಿ ಬೆಳೆಯುತ್ತಿದೆ ಎಂಬುದನ್ನು ಅರಿಯಲು ವಿಫಲರಾಗುವುದು. ಕೆಲವು ಸರಳವಾದ ಹಂತಗಳ ಮೂಲಕ ಹಾಗೂ ಕೆಲ ಗುಣಾತ್ಮಕ ಅಂಶಗಳ ಗಮನಿಸುವಿಕೆಯಿಂದ ಈ ಪ್ರಯತ್ನ ಮಾಡಬಹುದು. ಪೋಷಕರು ಮಾಡಬೇಕಾದ ಮಹತ್ವದ ಎರಡು ಕೆಲಸವೆಂದರೆ ಆ ತರಹದ ಮಕ್ಕಳನ್ನು ಗುರುತಿಸುವುದು ಮತ್ತು ಅದಕ್ಕೆ ಪೂರಕವಾದ ಪೋಷಣೆ ನೀಡುವುದು.

ಪ್ರತಿಭೆ ಗುರುತಿಸುವಿಕೆ   
ವಿಶೇಷ ಸಾಮರ್ಥ್ಯದ ಮಕ್ಕಳನ್ನು ಒಂದೇ ವಿಧಾನದಿಂದ ಗುರುತಿಸಲು ಸಾಧ್ಯವಿಲ್ಲ. ಅವರಲ್ಲಿ ವೈವಿಧ್ಯಮಯ ಪ್ರತಿಭೆಗಳು ಅಡಗಿರುತ್ತವೆ.
ಚಿಕ್ಕವರಿದ್ದಾಗಿನಿಂದ ಅವರ ಬೆಳವಣಿಗೆಯ ಮೇಲೆ ಗಮನ ಕೊಡಬೇಕು. ಪ್ರತಿಭಾನ್ವಿತ ಮಕ್ಕಳು ದೈಹಿಕ ವಯಸ್ಸಿಗಿಂತ ಮಾನಸಿಕವಾಗಿ ಸಾಕಷ್ಟು ಮುಂದಿರುತ್ತಾರೆ. ಹಾಗಾಗಿ ಈ ವಿಶೇಷ ಮಕ್ಕಳು ಎಲ್ಲಾ ರಂಗದಲ್ಲೂ ನಿರೀಕ್ಷಿತ ಮಟ್ಟಕ್ಕಿಂತ ಮುಂದೆ ಹೋಗಿರುತ್ತಾರೆ.
ಶಿಶುವಾಗಿದ್ದಾಗ ಅವರ ದೈಹಿಕ ಬೆಳವಣಿಗೆಯನ್ನು ಗಮನಿಸುವುದು (ಬೇಗನೆ ಕುಳಿತುಕೊಳ್ಳುವುದು, ತಲೆ ನಿಲ್ಲುವುದು, ಎದ್ದು ಓಡಾಡುವುದು ಇತ್ಯಾದಿ). ಆ ಮಕ್ಕಳಲ್ಲಿ ಗ್ರಹಿಸುವಿಕೆಯೂ ವೇಗವಾಗಿರುತ್ತದೆ.
ಸಾಮಾಜಿಕ- ಭಾವನಾತ್ಮಕ ಬೆಳವಣಿಗೆಗಳನ್ನು ನೋಡುವುದು ಭಾಷಾ ಕಲಿಕೆಯನ್ನು ಆಲಿಸುವುದು (ಕೂಗುವಿಕೆ, ತೊದಲುನುಡಿ, ವಸ್ತುಗಳ ಹೆಸರನ್ನು ತಕ್ಷಣ ಗುರುತಿಸುವಿಕೆ) ಮೇಧಾವಿ ಮಕ್ಕಳು ವಯಸ್ಸಿಗೆ ಮೀರಿದ ಆಸಕ್ತಿ ಹೊಂದಿರುತ್ತಾರೆ. ಅವರ ಪ್ರತಿಭೆ ಅರಳಲು ಸರಿಯಾದ ಪೋಷಣೆ ಅಗತ್ಯ. ಮೇಧಾವಿ ಮಕ್ಕಳ ಪಾಲನೆಯು ಅತ್ಯಂತ ಸೂಕ್ಷ್ಮವಾದ ಗಮನ ಮತ್ತು ದಾಖಲೆಯನ್ನು ಬಯಸುತ್ತದೆ. ಅನೇಕ ಪಾಲಕರು ಸ್ವತಃ ತಾವೇ ಮಕ್ಕಳ ಬೆಳವಣಿಗೆಗಳ ಚಟುವಟಿಕೆಗಳನ್ನು ದಿನಚರಿ, ಆತ್ಮ ಚರಿತ್ರೆ, ವಿಡಿಯೋ ಚಿತ್ರೀಕರಣ ಮುಂತಾದವುಗಳಲ್ಲಿ ದಾಖಲಿಸಬಹುದು.

ವಿಶೇಷ ಪಠ್ಯಪ್ರಸ್ತುತ ಮಕ್ಕಳ ಕಲಿಕೆಗಿರುವ ಪಠ್ಯಕ್ರಮದ ಹಲವು ಕ್ಷೇತ್ರಗಳು ಮೇಧಾವಿ ಮಕ್ಕಳ ಬೆಳವಣಿಗೆಗೆ ಅಡ್ಡಿಪಡಿಸುತ್ತಲಿವೆ ಎಂದೇ ಹೇಳಬಹುದು. ಹಾಗಾಗಿ ಅಂತಹ ಮಕ್ಕಳಿಗೆ ಶಿಕ್ಷಕರು ಮತ್ತು ತಜ್ಞರು ವಿಶೇಷ ಪಠ್ಯವನ್ನು ಅವರ ಮುಂದಿನ ಕಲಿಕೆಗೆ ನೆರವಾಗುವಂತೆ ರೂಪಿಸಬೇಕಿದೆ.
ಈ ಮಕ್ಕಳು ಹೆಚ್ಚು ಹೆಚ್ಚು ಜ್ಞಾನದ ಹಸಿವನ್ನು ಹೊಂದಿರುತ್ತಾರೆ. ಹಾಗಾಗಿ ಶಾಲೆಯ ಹೊರಗೂ ಕಲಿಕೆಯ ಮುಂದಿನ ಹಂತಗಳ ಬಗ್ಗೆ ಪಾಲಕರು ಕೈಜೋಡಿಸಬೇಕು.
ಸಾಧ್ಯವಾದಷ್ಟು ಹೆಚ್ಚಿನ ಸಮಯ ಆ ಮಗುವಿನ ಜೊತೆಯಲ್ಲಿ ಕಳೆಯಬೇಕು. ಮಕ್ಕಳ ವೈಯಕ್ತಿಕ ಕೆಲಸದಲ್ಲಿ, ಯೋಜನೆಗಳನ್ನು ರೂಪಿಸುವಾಗ ಪೋಷಕರು ಸಾಥ್ ನೀಡಬೇಕು. ತಜ್ಞರು ಅಥವಾ ಆ ಕ್ಷೇತ್ರದ ಹಿರಿಯರನ್ನು ಸಂಪರ್ಕಿಸಿ ಮಗುವಿನ ಯೋಚನೆ, ಚಟುವಟಿಕೆ, ಆಸಕ್ತಿಗಳನ್ನು ಚಿಕ್ಕ ಟಿಪ್ಪಣಿ ರೂಪದಲ್ಲಿ ಬರೆದುಕೊಳ್ಳಬೇಕು. ನಂತರ ಅದನ್ನು ಮಾರ್ಗದರ್ಶಕರ ಮುಂದಿಡಬಹುದು. ಅದು ಮಗುವನ್ನು ಸರಿಯಾದ ಹಾದಿಯಲ್ಲಿ ನಡೆಸಲು ಸಹಾಯಕವಾಗುತ್ತದೆ.
ಪೋಷಣೆಯೆಂದರೆ ಕೇವಲ ಗಮನಕೊಡುವುದಲ್ಲ. ಬದಲಾಗಿ ಮಗು ಇನ್ನು ಯಾವ ಕ್ಷೇತ್ರಗಳಲ್ಲಿ ಹಿಂದೆ ಉಳಿದಿದೆ ಎಂಬುದು ಇಲ್ಲಿ ಮಹತ್ವವಾಗುತ್ತದೆ. ಹಲವು ಮಕ್ಕಳು ತಮ್ಮ ಪ್ರತಿಭೆಗೆ ಒಗ್ಗಿಕೊಂಡು ಪ್ರದರ್ಶಿಸಲು ಸದಾ ಸಿದ್ಧರಿರುತ್ತಾರೆ. ಆದರೆ ಕೆಲವು ಮಕ್ಕಳಲ್ಲಿ ಹಿಂಜರಿಕೆ ಮನೋಭಾವವಿರುತ್ತದೆ. ಅಂದರೆ ಅವರಲ್ಲಿ ತಾವು ಪರಿಪೂರ್ಣರಲ್ಲ ಎಂಬ ಭಾವನೆ, ಸಂಕೋಚ, ಅಹಂಕಾರಗಳಿಂದ ಸಹಜವಾಗಿ ಬೆರೆಯುವುದಿಲ್ಲ. ಮಕ್ಕಳು ತಮ್ಮ ಸಮಸ್ಯೆಗಳನ್ನು ಅರಿತುಕೊಂಡು ಅವಕ್ಕೆ ಅಂಜದೆ ದೃಢವಾಗಿ ಎದುರಿಸಲು ಬೇಕಾದ ಬೆಂಬಲವನ್ನು ಪಾಲಕರು ನೀಡಬೇಕು.

ಎಚ್ಚರಿಕೆಗಳೂ ಇವೆ...
ಪ್ರತಿಭಾನ್ವಿತ ಮಕ್ಕಳ ಪೋಷಣೆ ಮಾಡಬೇಕಾದರೆ ಮುಖ್ಯವಾಗಿ ಮೂರು ಅಂಶಗಳನ್ನು ಪಾಲಿಸಬೇಕು. 
ಮಗುವಿನ ಆಸಕ್ತಿ ಹಾಗೂ ಕೌಶಲಗಳ ಬಗ್ಗೆ ಸೂಕ್ಷ್ಮಸಂವೇದನೆ ಹೊಂದಬೇಕು. ಉನ್ನತ ಜ್ಞಾನವನ್ನು ಸರಿಯಾಗಿ ಪೋಷಿಸಿ ಮುನ್ನಡೆಸಬೇಕು. ಮಗುವಿನ ಅಸಾಧಾರಣ ಬೆಳವಣಿಗೆಯನ್ನು ಗುರುತಿಸಿ, ಗುರಿಸಾಧನೆಯತ್ತ ಮುಂದುವರೆಯಲು ಸಂಪೂರ್ಣ ಬೆಂಬಲ ನೀಡಬೇಕು. ಮಕ್ಕಳನ್ನು ಯಾವುದೇ ಚೌಕಟ್ಟಿನಡಿಯಲ್ಲಿ ಬಂಧಿಸಿಡುವುದು ಹಾಗೂ ಅವರ ಮೇಲೆ ಒತ್ತಡ ಹಾಕಿ, ಅವರ ಹಾದಿಯಿಂದ ದೂರ ಸರಿಸುವುದು ತರವಲ್ಲ.  ಶಾಲಾ ಶಿಕ್ಷಣದಲ್ಲಿ ಮಗು ಸಹಪಾಠಿಗಳಿಗಿಂತ ಹೆಚ್ಚು ಮುಂದಿರಬೇಕು ಎಂದು ಬಯಸುವುದು, ಮಗುವನ್ನು ಪ್ರದರ್ಶನ ಗೊಂಬೆತರಹ ಮಾಡುವುದು ಸರಿಯಾದ ಕ್ರಮಗಳಲ್ಲ.
ಮಗುವಿನ ಅವಶ್ಯಕತೆಗಳಿಗೆ ಆದ್ಯತೆ ನೀಡುತ್ತಾ, ಸಾಮಾನ್ಯ ಮತ್ತು ಒತ್ತಡರಹಿತ ಬಾಲ್ಯವನ್ನು ಅನುಭವಿಸುವಂತೆ ಮಾಡಿದರೆ ಮಗುವಿನ ಮಾನಸಿಕ ಆರೋಗ್ಯ ಸದೃಢವಾಗುತ್ತದೆ. ಕೆಲವು ಸಾರಿ ಮಗು ದೊಡ್ಡದಾದಂತೆ ಬಾಲ್ಯದಲ್ಲಿನ ಬೆಳವಣಿಗೆ ಕ್ಷೀಣಿಸಬಹುದು. ಅದನ್ನು ಹಾಗೆಯೇ ಸ್ವೀಕರಿಸುವುದು ಅತ್ಯಂತ ಮುಖ್ಯ ಎಂದು ಮಕ್ಕಳ ಮನಶಾಸ್ತ್ರ ಒತ್ತಿ ಹೇಳುತ್ತದೆ

No comments:

Post a Comment