Tuesday, May 14, 2013

sslc &puc ನಂತರ ಮುಂದೆ ಇರುವ ಅವಕಾಶಗಳ ಕುರಿತ ಲೇಖನ ಪ್ರಜಾವಾಣಿಯ (13/5/13) ಶಿಕ್ಷಣ ಪುರವಣಿಯಲ್ಲಿ ಓದಿ



ಇಗೋ ಇಲ್ಲಿದೆ ಅವಕಾಶ

ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿರುವ ಆದರ್ಶನಿಗೆ ಪಿ.ಯು.ಸಿ.ಯಲ್ಲಿ ವಿಜ್ಞಾನ ವಿಭಾಗವನ್ನು ಆಯ್ಕೆ ಮಾಡಿಕೊಂಡು ಅಭ್ಯಾಸ ಮಾಡಿದರೆ ಸಿ.ಇ.ಟಿ.ಯಲ್ಲಿ ಉತ್ತಮ ಸ್ಥಾನ ಸಿಗುವುದಿಲ್ಲ, ಜೊತೆಗೆ ಆ ಒತ್ತಡವನ್ನು ತಡೆಯಲು ಆಗುವುದಿಲ್ಲವೇನೋ ಎಂಬ ಅನುಮಾನ. ಅದಕ್ಕೆ ಅವನು, ಮೂರು ವರ್ಷದ ಡಿಪ್ಲೊಮಾ ಮಾಡಿಕೊಂಡರೆ ಮುಂದೆ ಎಂಜಿನಿಯರಿಂಗ್ ಸೀಟು ಗ್ಯಾರಂಟಿ ಮತ್ತು ಒಂದು ವರ್ಷ ರಿಯಾಯಿತಿ ತೆಗೆದುಕೊಂಡು ಸೀದಾ ಎರಡನೇ ವರ್ಷಕ್ಕೆ ಪ್ರವೇಶ ಪಡೆಯಬಹುದು ಎಂಬ ಯೋಜನೆಯಲ್ಲಿದ್ದಾನೆ.
ಸುಮಾ ಹೇಳುತ್ತಾಳೆ `ವಿಜ್ಞಾನ ವಿಭಾಗದಲ್ಲಿ ಹೆಚ್ಚಿನ ಕೆಲಸದಿಂದಾಗಿ ಒತ್ತಡ ಉಂಟಾಗುತ್ತದೆ. ಕಾಮರ್ಸ್‌ನಲ್ಲಿ ಆ ಒತ್ತಡ ಕಡಿಮೆ. ನಂತರ ಬಿ.ಬಿ.ಎಂ., ಎಂ.ಬಿ.ಎ. ಮಾಡುತ್ತೇನೆ. ಜೊತೆಗೆ ಕಂಪ್ಯೂಟರ್ ಕೋರ್ಸ್. ಅದರಲ್ಲಿ ಟ್ಯಾಲಿ ಕಲಿತರೆ ಸಿ.ಎ. ಮಾಡುವುದು ಕೂಡಾ ಸುಲಭ. ಹಾಗಾಗಿ ನನಗೆ ಕಲೆ ಹಾಗೂ ವಿಜ್ಞಾನ ಎರಡೂ ಬೇಡ'.
ನೇಹಾಳದು ಮತ್ತೊಂದು ದಾರಿ. `ಇಂಗ್ಲಿಷ್‌ಗೆ ಇಂದು ಹೆಚ್ಚು ಪ್ರಾಧಾನ್ಯತೆ ಸಿಗುತ್ತಿದೆ. ಅದಕ್ಕೆ ಇಂಗ್ಲಿಷ್ ಮೇಜರ್, ಕಮ್ಯುನಿಕೇಟಿವ್ ಇಂಗ್ಲಿಷ್, ಫಂಕ್ಷನಲ್ ಇಂಗ್ಲಿಷ್ ಮಾಡಿ, ಮುಂದೆ ಬಿ.ಇಡಿ., ಎಂ.ಇಡಿ. ಮಾಡಿದರೆ ಕೆಲಸವೂ ಖಾತ್ರಿ, ಟ್ಯೂಷನ್ ಮಾಡಿಯೂ ಬದುಕಬಹುದಲ್ಲ' ಎಂದು ಅಭಿಪ್ರಾಯ ಪಡುತ್ತಾಳೆ. 
ಪಿಯುಸಿ ಪರೀಕ್ಷೆ ಬರೆದಿರುವ ಶಿವಪ್ರಕಾಶನಿಗೆ `ಟೆಕ್ನಿಕಲ್ ಕೋರ್ಸ್‌ಗಿಂತ ಲೈಫ್ ಸೈನ್ಸ್‌ಗೆ ಹೆಚ್ಚು ಬೇಡಿಕೆ ಇದೆಯಂತೆ. ಅದಕ್ಕೆ ಬಯೊ ಟೆಕ್ನಾಲಜಿ, ಬಯೊ ಇನ್‌ಫರ್ಮೆಟಿಕ್ಸ್, ಅಗ್ರಿಕಲ್ಚರ್ ಯಾವುದಾದರೂ ಮಾಡಲು ಸಿದ್ಧ. ಅವು ಓದಲು ಸುಲಭ ಹಾಗೂ ಒತ್ತಡ ಕಡಿಮೆ' ಎಂಬ ಮನೋಭಾವ.
ಇತ್ತೀಚಿನ ದಿನಗಳಲ್ಲಿ ನಮ್ಮ ಸುತ್ತಮುತ್ತಲಿನ ಮಕ್ಕಳೆಲ್ಲರೂ ಈ ರೀತಿ ನಾನಾ ಬಗೆಯ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಅವರು ತಮ್ಮ ಮುಂದಿನ ದಾರಿ ಯಾವುದು, ಎತ್ತ ಕಡೆ ಪಯಣ ಎಂಬ ಪ್ರಶ್ನೆ ಎದುರಾದಾಗ, ತಮ್ಮ ಆಸಕ್ತಿ, ಪಾಲಕರ ಆದಾಯ... ಇತ್ಯಾದಿಗಳನ್ನು ಗಮನಿಸಿ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳುತ್ತಿರುವ ಸಂಪ್ರದಾಯ ನಿಧಾನವಾಗಿ ಬೆಳೆಯುತ್ತಿದೆ.
ಹಿಂದೆಲ್ಲ ಈ ಬಗೆಯಲ್ಲಿ ವಿವಿಧ ಆಸಕ್ತಿಗಳಿಗೆ ಅನುಗುಣವಾದ ಬಗೆಬಗೆಯ ಕೋರ್ಸ್‌ಗಳಿರಲಿಲ್ಲ. ಎಸ್ಸೆಸ್ಸೆಲ್ಸಿ, ಪಿಯುಸಿ, ನಂತರ ಪದವಿ, ಶಿಕ್ಷಕರ ತರಬೇತಿ, ಎಂ.ಎ. ಎಂಬುದು ಒಂದು ಬಗೆಯ ದಾರಿಯಾಗಿತ್ತು. ಅದು ಬಿಟ್ಟರೆ ಲಾ, ಎಂಜಿನಿಯರಿಂಗ್, ಮೆಡಿಕಲ್ ಎಂಬ ಇನ್ನೊಂದು ದಾರಿ ಮಾತ್ರ ಸಿಗುತ್ತಿತ್ತು. ಆದರೆ ಇಂದು ಸಾಕಷ್ಟು ಬದಲಾಗಿದೆ. ಹಾಗಾಗಿ ಮಕ್ಕಳು ಮತ್ತು ಪೋಷಕರು ಯಾವುದಕ್ಕೆ ಸೇರಿದರೆ ಹೆಚ್ಚು ಅನುಕೂಲ, ತಕ್ಷಣ ಲಾಭ ಸಿಗುತ್ತದೆ ಎಂಬುದನ್ನು ಮುಖ್ಯವಾಗಿ ಪರಿಗಣಿಸುತ್ತಿದ್ದಾರೆ. ಹಾಗಾಗಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ನಂತರ ಇರುವ ಅವಕಾಶಗಳತ್ತ ಒಮ್ಮೆ ದೃಷ್ಟಿ ಹಾಯಿಸಿದಾಗ ಸಾಕಷ್ಟು ಆಯ್ಕೆಗಳು ನಮಗೆ ಕಾಣಿಸುತ್ತವೆ.
ಎಸ್ಸೆಸ್ಸೆಲ್ಸಿ ನಂತರ...
ಎಸ್ಸೆಸ್ಸೆಲ್ಸಿ ಉತ್ತೀರ್ಣರಾದವರಿಗಾಗಿ ಪದವಿ ಪೂರ್ವ ಮತ್ತು ವೃತ್ತಿ ಶಿಕ್ಷಣ ಇಲಾಖೆಗಳು ತಮ್ಮ ವೆಬ್‌ಸೈಟ್‌ನಲ್ಲಿ ಪದವಿ ಪೂರ್ವ ಶಿಕ್ಷಣದ ಎಲ್ಲ ವಿಭಾಗಗಳನ್ನೂ ಪ್ರಕಟಿಸಿವೆ. ಕಲಾ ವಿಭಾಗದಲ್ಲಿ 42, ವಾಣಿಜ್ಯ ವಿಭಾಗದಲ್ಲಿ 8 ಮತ್ತು ವಿಜ್ಞಾನ ವಿಭಾಗದಲ್ಲಿ 6 ಬಗೆಯ ಆಸಕ್ತಿಗೆ ಅನುಗುಣವಾದ ಕಾಂಬಿನೇಷನ್‌ಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಇದೆ. (ಗಮನಿಸಿ- www.pue.kar.nic.in)
ಮೂರು ವರ್ಷದ ಡಿಪ್ಲೊಮಾ ಕೋರ್ಸ್‌ನಲ್ಲಿ 26 ವಿಭಾಗಗಳಲ್ಲಿ ಅಧ್ಯಯನ ಮಾಡಬಹುದು. ಇನ್ನು ಪ್ಯಾರಾ ಮೆಡಿಕಲ್ ಡಿಪ್ಲೊಮಾ ಕೋರ್ಸ್‌ನಲ್ಲಿ ಆರು ವಿಭಾಗಗಳಿವೆ. ಒಂದು ವರ್ಷದ ಎ.ಎನ್.ಎಂ. ಸರ್ಟಿಫಿಕೇಟ್ ಕೋರ್ಸ್, ಆರೋಗ್ಯ ನಿರೀಕ್ಷಕರ ಕೋರ್ಸ್, ನರ್ಸಿಂಗ್ ಜನರಲ್, ನರ್ಸಿಂಗ್ ಡಿಪ್ಲೊಮಾ  ಮುಂತಾದ ಅವಕಾಶಗಳಿವೆ (ಗಮನಿಸಿ-www.ksdned.org)ಈ ಆರೋಗ್ಯ ಕ್ಷೇತ್ರದಲ್ಲೇ ತಪಾಸಣೆ, ರೋಗ ವಿಧಾನ, ಸಂವಹನ, ಕೌನ್ಸೆಲಿಂಗ್, ನರ್ಸಿಂಗ್, ಫಾರ್ಮಸಿ, ರೇಡಿಯಾಲಜಿ ಕ್ಷೇತ್ರಗಳಲ್ಲಿ ಸರ್ಟಿಫಿಕೇಟ್/ ಡಿಪ್ಲೊಮಾ ಕೋರ್ಸ್‌ಗಳಿವೆ (ಗಮನಿಸಿ-www.pmbkarnataka.org) ಎರಡು ವರ್ಷಗಳ ಐ.ಟಿ.ಐ.ನಲ್ಲಿ 34 ವಿಭಾಗಗಳಿವೆ. (ಗಮನಿಸಿ-www.karnatakaeducation.net).ಇವುಗಳ ಹೊರತಾಗಿ ನಾನಾ ಬಗೆಯ ಕ್ರಾಷ್ ಕೋರ್ಸ್‌ಗಳಿವೆ. ಆಸಕ್ತಿಗೆ ಅನುಗುಣವಾಗಿ ಹುಡುಕುವ ಅಭ್ಯಾಸ ರೂಢಿಸಿಕೊಳ್ಳಬೇಕಷ್ಟೆ.
ವೃತ್ತಿ ಕೌಶಲ
ಕೇಂದ್ರ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಇಲಾಖೆ ಅಡಿ 14 ವರ್ಷ ಮೇಲ್ಪಟ್ಟವರಿಗಾಗಿ ಮಾಡ್ಯುಲಾರ್ ಎಂಪ್ಲಾಯಬಲ್ ಸ್ಕಿಲ್ಸ್‌ನಲ್ಲಿ ಗೃಹಾಧಾರಿತ ಸೇರಿದಂತೆ ಒಟ್ಟು 1252 ವಿವಿಧ ಬಗೆಗಳಲ್ಲಿ ತರಬೇತಿ ನೀಡಿ ಕೌಶಲವನ್ನು ವೃದ್ಧಿಸಲಾಗುತ್ತಿದೆ. ಅದು ಸ್ವ ಉದ್ಯೋಗ ಕೈಗೊಳ್ಳಲು ಹೆಚ್ಚಿನ ಬೆಂಬಲ ನೀಡುತ್ತದೆ (ಗಮನಿಸಿ- www.koushalyasiri.in http://dget.gov.in/ )
ಬಗೆ ಬಗೆ ಆಯ್ಕೆ...
ಪದವಿ ಪೂರ್ವ ಶಿಕ್ಷಣ ಮಕ್ಕಳ ಬದುಕಿನ ಮಹತ್ತರವಾದ ಘಟ್ಟ. ಅಲ್ಲಿಂದ ಮಕ್ಕಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಆರಂಭಿಸುತ್ತಾರೆ. ದ್ವಿತೀಯ ಪಿಯುಸಿಯಲ್ಲಿ ಗಳಿಸುವ ಅಂಕಗಳು ಹಾಗೂ ಅವರವರ ಆಸಕ್ತಿಗೆ ಅನುಗುಣವಾಗಿ ಮುಂದಿನ ವಿದ್ಯಾಭ್ಯಾಸ ನಿರ್ಧಾರವಾಗುತ್ತದೆ. ಇದುವರೆಗೂ ಪಿಯುಸಿ ನಂತರ ಎಂಜಿನಿಯರಿಂಗ್, ವೈದ್ಯಕೀಯದಂತಹ ಕೆಲವೇ ವಿಭಾಗಕ್ಕೆ ವಿದ್ಯಾರ್ಥಿಗಳು ಸೀಮಿತವಾಗುತ್ತಿದ್ದರು. ಆದರೆ ಈಗ ಪಿಯುಸಿ ನಂತರ 300ಕ್ಕೂ ಹೆಚ್ಚಿನ ವಿವಿಧ ವಿಷಯಗಳ ಅಧ್ಯಯನದ ಅವಕಾಶ ನಮ್ಮ ರಾಜ್ಯದ ಮಕ್ಕಳಿಗೆ ದೊರಕುತ್ತಿದೆ. ಅವುಗಳಲ್ಲಿ ಉತ್ತಮವಾದುದನ್ನು ಆಯ್ಕೆ ಮಾಡಿಕೊಳ್ಳಬೇಕಾದ ಜಾಣ್ಮೆ ಅವರಲ್ಲಿ ಇರಬೇಕು.
ಪಿಯುಸಿಯ ಸಾಮಾನ್ಯ ವಿಜ್ಞಾನದಲ್ಲಿ ಉತ್ತೀರ್ಣರಾದವರಿಗೆ ಸುಮಾರು 90 ಬಗೆಯ ವಿಷಯಗಳಿದ್ದು, ಮೂರು ವರ್ಷದಲ್ಲಿ ಆರು ಸೆಮಿಸ್ಟರ್‌ನ ಪದವಿ ಅಥವಾ ಐದು ವರ್ಷಗಳ ಇಂಟಿಗ್ರೇಟೆಡ್ ಪಿ.ಜಿ. ಮಾಡಲು ಅವಕಾಶವಿದೆ. ಸಿ.ಇ.ಟಿ. ಆಧಾರದ ಮೇಲೆ ವೈದ್ಯಕೀಯ, ಎಂಜಿನಿಯರಿಂಗ್ ಇತ್ಯಾದಿಗಳ ವಿವರ ಎಲ್ಲರಿಗೂ ತಿಳಿದಿರುವ ಸಂಗತಿ (ಗಮನಿಸಿ-www.cetkarnataka.in ) ಅದೇ ರೀತಿ ಕಾಮರ್ಸ್ ಮಾಡಿದವರು ಬಿ.ಕಾಂ., ಬಿ.ಬಿ.ಎಂ., ಎಂ.ಬಿ.ಎ., ಸಿ.ಎ., ಸಿ.ಎಫ್.ಎ., ಡಿ.ಡಬ್ಲ್ಯು.ಎ., ಸಿ.ಎಸ್. ಮೊದಲಾದವಕ್ಕೆ ಈಗ ಬೇಡಿಕೆ ಹೆಚ್ಚಾಗುತ್ತಿರುವುದನ್ನು ಗಮನಿಸಬಹುದು.
ಕಲಾ ವಿಭಾಗದಲ್ಲಿ ಭಾಷೆ, ಐಚ್ಛಿಕ ವಿಷಯಗಳ ಪದವಿ, ಸ್ನಾತಕೋತ್ತರ ಪದವಿ ಸೇರಿದಂತೆ ಹೊಸದಾಗಿ ಇಂಟಿಗ್ರೇಟೆಡ್ ಕೋರ್ಸ್‌ಗಳು ಸೇರಿಕೊಂಡಿವೆ. ಪತ್ರಿಕೋದ್ಯಮ, ಫೋಟೊ ಜರ್ನಲಿಸಂ, ಫ್ಯಾಶನ್ ಡಿಸೈನಿಂಗ್, ಅಪರಾಧ ಶಾಸ್ತ್ರ ಮತ್ತು ನ್ಯಾಯಿಕ ವೈದ್ಯಶಾಸ್ತ್ರ, ಮಾಧ್ಯಮ ಅಧ್ಯಯನ, ದೂರ ಶಿಕ್ಷಣ, ಆಹಾರ ಸಂಸ್ಕರಣೆ, ಮತ್ಸ್ಯೋದ್ಯಮ, ಹರಳು ಮತ್ತು ಆಭರಣ ವಿನ್ಯಾಸ... ಮುಂತಾದವು ವಿದ್ಯಾರ್ಥಿಗಳಿಗೆ ಪ್ರಿಯವಾಗುತ್ತಿವೆ. ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳು ತಮ್ಮ ವ್ಯಾಪ್ತಿಯ ಕಾಲೇಜುಗಳಲ್ಲಿ ಕಲೆ, ವಾಣಿಜ್ಯ, ವಿಜ್ಞಾನ, ಲಲಿತ ಕಲೆ, ದೃಶ್ಯ ಕಲೆ, ಮುದ್ರಣ, ಮಾಹಿತಿ ತಂತ್ರಜ್ಞಾನ, ಅನ್ವಯಿಕ ವಿಷಗಳಲ್ಲಿ ಡಿಪ್ಲೊಮಾ, ಪದವಿ, ಸ್ನಾತಕೋತ್ತರ ಪದವಿ, ಸ್ನಾತಕೋತ್ತರ ಡಿಪ್ಲೊಮಾ, ಸಂಶೋಧನೆ, ಡಾಕ್ಟರೇಟ್ ಸೇರಿದಂತೆ ನಾನಾ ರೀತಿಯ ಅಧ್ಯಯನಕ್ಕೆ ಅವಕಾಶ ನೀಡಿವೆ. (ಗಮನಿಸಿ-ಆಯಾ ವಿ.ವಿ.ಗಳ ಅಂತರ್ಜಾಲ)
ರಾಜ್ಯದಲ್ಲಿರುವ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಹಾಗೂ ಅಧ್ಯಯನ ಕೇಂದ್ರಗಳಲ್ಲಿ ಕೃಷಿ, ತೋಟಗಾರಿಕೆ, ಕೃಷಿ ಎಂಜಿನಿಯರಿಂಗ್, ಡೈರಿ ಟೆಕ್ನಾಲಜಿ, ಬಯೊ ಟೆಕ್ನಾಲಜಿ, ಅರಣ್ಯ ಶಾಸ್ತ್ರ, ಆಹಾರ ವಿಜ್ಞಾನ, ಮೀನು ಮತ್ತು ನೀರಿನ ಜೀವಿಗಳ ವಿಜ್ಞಾನ, ಗೃಹ ವಿಜ್ಞಾನ, ರೇಷ್ಮೆ ಕೃಷಿ, ಕೃಷಿ ಉತ್ಪನ್ನ ಮಾರಾಟ, ಬ್ಯಾಂಕಿಂಗ್ ಮತ್ತು ಸಹಕಾರ, ವಾಣಿಜ್ಯ ಕೃಷಿ ಮತ್ತು ವ್ಯವಹಾರ ನಿರ್ವಹಣೆ ಮುಂತಾದ ವಿಷಯಗಳಲ್ಲಿ ಬಿ.ಎಸ್ಸಿ., ಬಿ.ಟೆಕ್, ಬಿ.ಇ.ಎಸ್ಸಿ, ಪದವಿ ಮತ್ತು ಸ್ನಾತಕೋತ್ತರ ಪದವಿ ತರಗತಿಗಳನ್ನು, ಸಂಶೋಧನೆಗಳನ್ನು ಮಾಡಬಹುದಾಗಿದೆ. (ಗಮನಿಸಿ-www.uasbanglore.edu.in & www.icar.org.in ) ಇದರ ಜೊತೆಗೆ ಪಶು ವೈದ್ಯಕೀಯ ರಂಗಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಸಕ್ತಿ ತೋರುತ್ತಿದ್ದಾರೆ. (ಗಮನಿಸಿ-  www.kvafsc.nic.in )
ಅರೆ ವೈದ್ಯಕೀಯ ಕೋರ್ಸ್‌ಗಳು, ಅದರಲ್ಲೂ ಲ್ಯಾಬ್ ಟೆಕ್ನೀಷಿಯನ್,   ಎಕ್ಸ್‌ರೇ ಟೆಕ್ನೀಷಿಯನ್, ನರ್ಸಿಂಗ್ ಕೋರ್ಸ್‌ಗಳಿವೆ. ಕಂಪ್ಯೂಟರ್ ಮಾಯಾಲೋಕದಲ್ಲಿ ಸಾಕಷ್ಟು ಅವಕಾಶಗಳಿವೆ. ಯುವಜನ ಆ್ಯನಿಮೇಶನ್ ಹಾಗೂ ಗ್ರಾಫಿಕ್ ಡಿಸೈನಿಂಗ್‌ನತ್ತ ಹೆಚ್ಚು ವಾಲುತ್ತಿದ್ದಾರೆ.
ಪಾಲಕರೇ ಯೋಚಿಸಿ
ಸಾಹಿತ್ಯ, ಸಂಗೀತ, ಕಲೆ, ನಾಟಕ, ನೃತ್ಯ, ಕುಶಲ ಕಲೆಗಳಲ್ಲಿ ಆಸಕ್ತಿ ಇರುವ ಮಕ್ಕಳಿಗೆ ಪೋಷಕರು ಬಲವಂತವಾಗಿ ಮತ್ತಾವುದೋ ಕೋರ್ಸಿಗೆ ಸೇರಿಸಿದಾಗ ಕೆಲವರು ಮಾತ್ರ ಎರಡರಲ್ಲೂ ಸೈ ಎನಿಸಿಕೊಳ್ಳುತ್ತಾರೆ. ಆದರೆ ಬಹುತೇಕರು ವಿಫಲರಾದ ಉದಾಹರಣೆಗಳಿವೆ.
ವಿದ್ಯಾರ್ಥಿಗಳಿಗೆ ಹಿರಿಯರು ಹಲವು ಬಗೆಯ ಆಯ್ಕೆಗಳ ಬಗ್ಗೆ ಮಾಹಿತಿ ನೀಡಬೇಕು. ವಿದ್ಯಾರ್ಥಿಗಳು ಅಗತ್ಯವಾದಲ್ಲಿ ತಜ್ಞರ ಅಥವಾ ಆ ಕ್ಷೇತ್ರದಲ್ಲಿ ಸಾಧನೆ ಮಾಡಿದವರ ಬಳಿ ಮಾರ್ಗದರ್ಶನ ಪಡೆಯಬೇಕು. ಸಾಧ್ಯವಾದರೆ ಆಪ್ತ ಸಮಾಲೋಚಕರ, ಮನೋವೈದ್ಯರ ಸೇವೆಯನ್ನು ಪಡೆಯಬಹುದು.
ಬಹಳ ಮುಖ್ಯವಾಗಿ, ಪೋಷಕರು ತಮಗೆ ಇಷ್ಟವಾಗುವ ಅಥವಾ ಒಣ ಪ್ರತಿಷ್ಠೆ ತೋರಿಸುವ ಸಲುವಾಗಿ `ಇದನ್ನೇ ಓದು' ಎಂದು ಮಕ್ಕಳ ಮೇಲೆ ಒತ್ತಡ ಹೇರಬಾರದು. ಅದಕ್ಕೆ ಬದಲಾಗಿ ಮಕ್ಕಳ ಜೊತೆ ಮುಕ್ತ ಮಾತುಕತೆ ನಡೆಸಿ, ಅವರಿಗೆ ಆಸಕ್ತಿಯುಳ್ಳ ಕೋರ್ಸ್‌ನ್ನೇ ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಬೇಕು. ಆಗ ಮಕ್ಕಳ ಮನೋಸಾಮರ್ಥ್ಯ ಹೆಚ್ಚಾಗುವುದಲ್ಲದೆ, ಅವರು ಸಾಧನೆಯ ಹಾದಿಯಲ್ಲಿ ಸಾಗುತ್ತಾರೆ.
Supporting Image: 
This is an article from newspaper Deccan Herald appeared on May 13, 2013 in page 1. Click the following link to read : http://prajavaniepaper.com/svww_showarticle.php?art=20130513p_001100001