Sunday, August 4, 2013

ಪ್ರಜಾವಾಣಿ ಪತ್ರಿಕೆಲ್ಲಿ (5/8/13)ರಾಜ್ಯ ಗಣಿತ & ವಿಜ್ಞಾನ ಒಲಂಪಿಯಾಡ್ ಕುರಿತ ಲೇಖನ



ರಾಜ್ಯ ಒಲಂಪಿಯಾಡ್ ಸಿದ್ಧರಾಗೋಣ

ಮಕ್ಕಳಿಗೆ ಗಣಿತ- ವಿಜ್ಞಾನ ವಿಷಯಗಳು ಹೆಚ್ಚು ಪ್ರಿಯವಾಗಬೇಕು ಎಂಬ ಅಭಿಲಾಷೆ ನಿನ್ನೆ ಮೊನ್ನೆಯದಲ್ಲ. ಅದಕ್ಕಾಗಿ ಸರ್ಕಾರ, ಶಿಕ್ಷಣ ಇಲಾಖೆ, ಸಂಘ- ಸಂಸ್ಥೆಗಳು, ತಜ್ಞರು ಹಾಗೂ ಶಿಕ್ಷಕರು ಹೊಸ ಹೊಸ ಪ್ರಯೋಗಗಳಿಗೆ ಕೈ ಹಾಕುತ್ತಲೇ ಇರುತ್ತಾರೆ. ಕ್ಲಿಷ್ಟ ಅಂಶಗಳನ್ನು ಸರಳವಾಗಿ ಮನನ ಮಾಡಿಸಲು ಮತ್ತು ಪ್ರಾತ್ಯಕ್ಷಿಕೆ ಒದಗಿಸಲು ವಿಜ್ಞಾನ- ಗಣಿತ ಪ್ರಯೋಗಾಲಯಗಳು, ಮೇಳಗಳು, ಮಾದರಿ ವಸ್ತು ಪ್ರದರ್ಶನಗಳು, ಗೋಷ್ಠಿಗಳು, ಎಜುಸ್ಯಾಟ್ ಪಾಠ... ಹೀಗೆ ಹತ್ತಾರು ವಿನೂತನ ಕಾರ್ಯಕ್ರಮಗಳು ಮಕ್ಕಳ ಪ್ರತಿಭೆಗೆ ಸಾಣೆ ಹಿಡಿಯುವ ಕೆಲಸ ಮಾಡುತ್ತಲೇ ಇವೆ.
ಈ ಪ್ರಯತ್ನಗಳ ನಡುವೆಯೂ ಅನೇಕ ಮಕ್ಕಳಿಗೆ ಇಂದಿಗೂ ಗಣಿತ- ವಿಜ್ಞಾನ ಕಬ್ಬಿಣದ ಕಡಲೆ. ಈ ವಿಷಯಗಳನ್ನು ಇತರ ಸಾಮಾನ್ಯ ವಿಷಯಗಳಂತೆ ಅವರು ಪರಿಗಣಿಸುತ್ತಿಲ್ಲ. ಅದಕ್ಕೆ ಪ್ರಮುಖವಾದ ಕಾರಣವೆಂದರೆ, ದಿನನಿತ್ಯ ತಮ್ಮ ಪರಿಸರದಲ್ಲಿ, ಶಾಲೆಯಲ್ಲಿ, ಮನೆಯಲ್ಲಿ ಎಲ್ಲೆಡೆ ನಡೆಯುವ ಚಟುವಟಿಕೆಗಳ ಹಿಂದಿರುವ ಗಣಿತ- ವಿಜ್ಞಾನದ ರಹಸ್ಯಗಳು ಮಕ್ಕಳಿಗೆ ಸರಿಯಾಗಿ ಮನನವಾಗುತ್ತಿಲ್ಲ. ಇದರಿಂದಾಗಿ ಈ ವಿಷಯಗಳು ಮಕ್ಕಳಿಗೆ, ಅದರಲ್ಲೂ ಪ್ರಾಥಮಿಕ- ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆಸಕ್ತಿಯ ವಿಷಯಗಳಾಗುತ್ತಿಲ್ಲ. ಈ ಬೆಳವಣಿಗೆಯಿಂದ ದೇಶದಲ್ಲಿ ಗಣಿತ- ವಿಜ್ಞಾನ ಪದವೀಧರರು ಹಾಗೂ ವಿಜ್ಞಾನಿಗಳ ಸಂಖ್ಯೆ ಕಡಿಮೆಯಾಗುತ್ತಿದೆ.
ರಾಜ್ಯ ಶಿಕ್ಷಣ ಇಲಾಖೆ ಇಂತಹ ಅನೇಕ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿದಂತಿದೆ. ಅದಕ್ಕಾಗಿ ಈ ವರ್ಷದಿಂದ ಸರ್ಕಾರಿ ಶಾಲೆಯ ಮಕ್ಕಳಿಗೆ ಗಣಿತ ಮತ್ತು ವಿಜ್ಞಾನ ಒಲಂಪಿಯಾಡ್ ಪರೀಕ್ಷೆ ಆಯೋಜಿಸುತ್ತಿದೆ.
ಏನಿದು ಒಲಂಪಿಯಾಡ್?
ನಮ್ಮ ಮಕ್ಕಳಲ್ಲಿ ಅನೇಕ ಬಗೆಯ ಪ್ರತಿಭೆ ಇರುತ್ತದೆ. ಸರಿಯಾದ ಪ್ರೋತ್ಸಾಹ ಸಿಗದೆ ಅಂತಹ ಬಹುತೇಕ ಪ್ರತಿಭೆಗಳು ಕಮರಿ ಹೋಗುತ್ತವೆ. ಅದರಲ್ಲೂ ವಿಜ್ಞಾನ- ಗಣಿತ ವಿಷಯಕ್ಕೆ ಇದು ಹೆಚ್ಚು ಅನ್ವಯಿಸುತ್ತದೆ. ಹಾಗಾಗಿ ಈ ವಿಷಯಗಳಲ್ಲಿ ಸರ್ಕಾರಿ ಶಾಲೆಗಳಲ್ಲಿನ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಪ್ರೇರಣೆ ನೀಡುವುದು ಈ ಒಲಂಪಿಯಾಡ್‌ನ ಪ್ರಮುಖ ಉದ್ದೇಶ. ಅದಕ್ಕಾಗಿ ಈ ವರ್ಷ 6 ಮತ್ತು 9ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳೆಲ್ಲರೂ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ. ಕನ್ನಡ- ಇಂಗ್ಲಿಷ್ ಎರಡೂ ಮಾಧ್ಯಮಗಳ ಮಕ್ಕಳು ಭಾಗವಹಿಸಬಹುದು. ಪ್ರಶ್ನೆ ಪತ್ರಿಕೆ ಕನ್ನಡ ಮಾಧ್ಯಮದಲ್ಲಿ ಇರಲಿದೆ.
ಸ್ಪರ್ಧೆಯ ಹಂತ
ಶಾಲೆ, ತಾಲ್ಲೂಕು, ಜಿಲ್ಲಾ ಹಾಗೂ ರಾಜ್ಯ ಹಂತದ ನಾಲ್ಕು ಬಗೆಗಳಲ್ಲಿ ಈ ಪರೀಕ್ಷೆಗಳನ್ನು ಆಯೋಜಿಸಲಾಗುತ್ತದೆ.
ಶಾಲಾ ಹಂತದಲ್ಲಿ ಆಯಾ ಶಾಲೆಯ 6 ಮತ್ತು 9ನೇ ತರಗತಿಯ ಎಲ್ಲ ಮಕ್ಕಳೂ ಪರೀಕ್ಷೆಯಲ್ಲಿ ಭಾಗವಹಿಸಬಹುದು. ರಾಜ್ಯದಾದ್ಯಂತ ಆಗಸ್ಟ್ 31ರಂದು ಏಕಕಾಲಕ್ಕೆ ಶಾಲಾ ಹಂತದ ಪರೀಕ್ಷೆ ನಡೆಯಲಿದೆ. ಉತ್ತರ ಪತ್ರಿಕೆಗಳನ್ನು ಶಾಲಾ ಹಂತದಲ್ಲೇ ಮೌಲ್ಯಮಾಪನ ಮಾಡಿ ಸೆಪ್ಟೆಂಬರ್ 4ರೊಳಗೆ ಫಲಿತಾಂಶ ಪ್ರಕಟಿಸಲಾಗುತ್ತದೆ. ಈ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಶೇ 5ರಷ್ಟು ಮಕ್ಕಳು ತಾಲ್ಲೂಕು ಹಂತಕ್ಕೆ ಅರ್ಹರಾಗುತ್ತಾರೆ. ಶಾಲಾ ಹಂತದಲ್ಲಿ ಭಾಗವಹಿಸಿದ ಎಲ್ಲ ಮಕ್ಕಳಿಗೆ ಶಾಲೆಯವರೇ ವಿಶ್ವೇಶ್ವರಯ್ಯನವರ ಜನ್ಮದಿನವಾದ ಸೆಪ್ಟೆಂಬರ್ 15ರಂದು ಪ್ರಮಾಣಪತ್ರ ವಿತರಣೆ ಮಾಡುತ್ತಾರೆ. ತಾಲ್ಲೂಕು ಹಂತದಲ್ಲಿ ಎಲ್ಲ ಶಾಲೆಗಳಿಂದ ಹೆಚ್ಚು ಅಂಕ ಗಳಿಸಿ ಆಯ್ಕೆಯಾದ ಮಕ್ಕಳಿಗೆ ಸೆಪ್ಟೆಂಬರ್ 21ರಂದು ರಾಜ್ಯದೆಲ್ಲೆಡೆ ಒಂದೇ ಸಮಯಕ್ಕೆ ಪರೀಕ್ಷೆ ನಡೆಯಲಿದೆ. ಈ ಫಲಿತಾಂಶವನ್ನು ಸೆ. 25ರಂದು ಇಲಾಖೆಯ ವೆಬ್‌ಸೈಟ್‌ನಲ್ಲಿ (http://www.schooleducation.kar.nic.in) ಪ್ರಕಟಿಸಲಾಗುತ್ತದೆ. ಈ ಹಂತದಲ್ಲಿ ಉನ್ನತ ಸ್ಥಾನ ಪಡೆದ ಶೇ 5ರಷ್ಟು ಮಕ್ಕಳು ಜಿಲ್ಲಾ ಹಂತಕ್ಕೆ ಪ್ರವೇಶ ಪಡೆಯುತ್ತಾರೆ. ಬ್ಲಾಕ್ ಹಂತದಲ್ಲಿ ಭಾಗವಹಿಸಿದ ಎಲ್ಲ ಮಕ್ಕಳಿಗೂ ಆಯಾ ಶಾಲೆಗಳಲ್ಲಿ ಗಾಂಧಿ ಜಯಂತಿಯಂದು ಶಿಕ್ಷಣ ಇಲಾಖೆ ವತಿಯಿಂದ ಪ್ರಮಾಣಪತ್ರ ವಿತರಿಸಲಾಗುತ್ತದೆ.
ಪ್ರತಿ ತಾಲ್ಲೂಕಿನಿಂದ ಆಯ್ಕೆಯಾದ ಮಕ್ಕಳಿಗೆ ನವೆಂಬರ್ 8ರಂದು ಎಲ್ಲ ಜಿಲ್ಲೆಗಳಲ್ಲಿ ಒಂದೇ ಬಾರಿಗೆ ಜಿಲ್ಲಾ ಹಂತದ ಪರೀಕ್ಷೆ ನಡೆಯುತ್ತದೆ. ಇದರ ಫಲಿತಾಂಶ ನವೆಂಬರ್ 13ರಂದು ಇಲಾಖೆಯ ವೆಬ್‌ಸೈಟ್‌ನಲ್ಲಿ ಪ್ರಕಟವಾಗಲಿದೆ. ಅತಿ ಹೆಚ್ಚು ಅಂಕ ಪಡೆದ ಶೇ 10ರಷ್ಟು ಮಕ್ಕಳು ಅಂತಿಮ ಹಂತವಾದ ರಾಜ್ಯ ಹಂತಕ್ಕೆ ಅರ್ಹರಾಗುತ್ತಾರೆ. ಜಿಲ್ಲಾ ಹಂತದಲ್ಲಿ ಪ್ರತಿ ವಿಷಯದಲ್ಲಿ ಅತಿ ಹೆಚ್ಚು ಅಂಕ ಪಡೆದ ಒಬ್ಬರಿಗೆ ಪ್ರಶಸ್ತಿ ಪತ್ರ ಹಾಗೂ ಬಹುಮಾನ (ಜನವರಿ 26) ನೀಡಲಾಗುತ್ತದೆ. ಭಾಗವಹಿಸಿದ ಎಲ್ಲ ಮಕ್ಕಳಿಗೂ ಬ್ಲಾಕ್ ಹಂತದ ಕಲಿಕೋತ್ಸವ ದಿನದಂದು ಪ್ರಮಾಣಪತ್ರ ವಿತರಿಸಲಾಗುತ್ತದೆ.
ರಾಜ್ಯ ಹಂತದ ಪರೀಕ್ಷೆಗೆ ಆಯ್ಕೆಯಾದ ಮಕ್ಕಳಿಗೆ ವಿಭಾಗೀಯ ಮಟ್ಟದಲ್ಲಿ ಡಿಸೆಂಬರ್ 13ರಂದು ಪರೀಕ್ಷೆ ನಡೆದು, 20ರಂದು ಫಲಿತಾಂಶ ಪ್ರಕಟವಾಗಲಿದೆ. ಈ ಪರೀಕ್ಷೆಯ ಗಣಿತ- ವಿಜ್ಞಾನದ ವಿಷಯಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ತಲಾ ಮೂವರು ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಮತ್ತು ಬಹುಮಾನದ ಜೊತೆಗೆ ಆ ಶಾಲೆಗೆ ರೋಲಿಂಗ್ ಶೀಲ್ಡ್‌ನ್ನು ಮುಂಬರುವ ಗಣರಾಜ್ಯೋತ್ಸವದಂದು ವಿತರಿಸಲಾಗುತ್ತದೆ.
ಪಠ್ಯವಸ್ತು ಮತ್ತು ಪ್ರಶ್ನೆಪತ್ರಿಕೆ
ರಾಜ್ಯ ಹಂತದಲ್ಲಿ ಗಣಿತ ಮತ್ತು ವಿಜ್ಞಾನ ವಿಷಯಗಳಿಗೆ ರಚಿಸಲಾಗುವ ಸಮಿತಿಯು ಒಲಂಪಿಯಾಡ್ ಪರೀಕ್ಷೆಗೆ ಪಠ್ಯ ವಸ್ತುವನ್ನು ನಿಗದಿಪಡಿಸಲಿದೆ. ಸಾಮಾನ್ಯವಾಗಿ 6ನೇ ತರಗತಿಗೆ 1ರಿಂದ 5ನೇ ತರಗತಿ ಪಠ್ಯವಸ್ತು, 9ನೇ ತರಗತಿಗೆ 8ನೇ ತರಗತಿವರೆಗಿನ ಪಠ್ಯವಸ್ತುವನ್ನು ಪರಿಗಣಿಸಬಹುದು. ಶಾಲಾ ಹಂತದ ಪರೀಕ್ಷೆಗೆ ಆಯಾ ಶಾಲಾ ಶಿಕ್ಷಕರೇ ಪ್ರಶ್ನೆ ಪತ್ರಿಕೆಯನ್ನು ಸಿದ್ಧ ಪಡಿಸಬೇಕಾಗುತ್ತದೆ. ಇದಕ್ಕೆ ಪೂರಕವಾಗಿ ರಾಜ್ಯ ಸಮಿತಿಯು ಜುಲೈ 31ರೊಳಗೆ ಪಠ್ಯವಸ್ತು ಹಾಗೂ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಇಲಾಖೆಯ ವೆಬ್‌ಸೈಟ್‌ನಲ್ಲಿ ಪ್ರಕಟಿಸುತ್ತದೆ. ರಾಜ್ಯ ಹಂತದ ಸಮಿತಿಯು ತಾಲ್ಲೂಕು, ಜಿಲ್ಲಾ ಹಾಗೂ ರಾಜ್ಯ ಹಂತದ ಪ್ರಶ್ನೆ ಪತ್ರಿಕೆಗಳನ್ನು ರೂಪಿಸಿ, ಪಬ್ಲಿಕ್ ಪರೀಕ್ಷೆ ಮಾದರಿಯಲ್ಲೇ ಪರೀಕ್ಷೆ ನಡೆಸುತ್ತದೆ.
ಪ್ರಶ್ನೆ ಪತ್ರಿಕೆಯಲ್ಲಿ ಪ್ರತಿ ವಿಷಯಕ್ಕೆ 50 ಪ್ರಶ್ನೆಗಳು ಇರುತ್ತವೆ. 50 ಅಂಕಗಳ ವಸ್ತುನಿಷ್ಠ ಬಹು ಆಯ್ಕೆಯ ಉತ್ತರಗಳನ್ನು ನೀಡಲಾಗುತ್ತದೆ. ಅದರಲ್ಲಿ `ಪೂರ್ಣಗೊಳಿಸಿ' `ಉತ್ತರ ಆಯ್ಕೆ ಮಾಡಿ' `ಹೊಂದಿಸಿ ಬರೆಯಿರಿ' `ಹೋಲಿಕೆ ಮಾಡಿ' `ಗುಂಪಿಗೆ ಸೇರದ ಪದ' ಇತ್ಯಾದಿ ವಿಧಗಳು ಇರುತ್ತವೆ. ಪ್ರತಿ ಪ್ರಶ್ನೆಗೆ ಒಂದು ಅಂಕ ಇದ್ದು, ಪ್ರತಿ ವಿಷಯದ ಪರೀಕ್ಷೆಗೆ ಒಂದು ಗಂಟೆ ಸಮಯ ನಿಗದಿಪಡಿಸಲಾಗಿದೆ. ಬ್ಲಾಕ್ ಹಂತದಿಂದ ಉತ್ತರ ಪತ್ರಿಕೆಗೆ ಒ.ಎಂ.ಆರ್. ಶೀಟ್ ಬಳಸಲಾಗುತ್ತಿದ್ದು, ಅದರ ಬಗ್ಗೆ ಮಕ್ಕಳಿಗೆ ಮುಂಚಿತವಾಗಿಯೇ ಮಾಹಿತಿ ನೀಡಲಾಗುತ್ತದೆ.
ಮಕ್ಕಳೇ, ಈ ಸುಂದರ ಅವಕಾಶವನ್ನು ತಪ್ಪದೇ ಬಳಸಿಕೊಳ್ಳುತ್ತೀರಿ ತಾನೇ? ಹಾಗಾದರೆ ತಡವೇಕೆ? ಒಲಂಪಿಯಾಡ್‌ಗೆ ಸಿದ್ಧರಾಗೋಣ ಬನ್ನಿ.
ಹೆಚ್ಚಿನ ಮಾಹಿತಿಗೆ ಹತ್ತಿರದ ಶಿಕ್ಷಣ ಇಲಾಖೆ ಅಧಿಕಾರಿಗಳನ್ನು ಅಥವಾ  http://ssakarnataka.gov.in/ ಅಥವಾhttp://www.schooleducation.kar.nic.in/
ಇತರ ಒಲಂಪಿಯಾಡ್
1959ರಲ್ಲಿ ರೊಮೇನಿಯಾದಲ್ಲಿ ಆರಂಭವಾಗಿರುವ, ಪ್ರತಿ ವರ್ಷ ಜುಲೈನಲ್ಲಿ ಬೇರೆ ಬೇರೆ ರಾಷ್ಟ್ರಗಳಲ್ಲಿ ಏರ್ಪಡಿಸಲಾಗುತ್ತಿರುವ ಅಂತರ ರಾಷ್ಟ್ರೀಯ ಗಣಿತ ಒಲಂಪಿಯಾಡ್‌ನಲ್ಲಿ ನೂರಕ್ಕೂ ಹೆಚ್ಚು ದೇಶಗಳ ಗಣಿತ ಉತ್ಸಾಹಿಗಳು ಪಾಲ್ಗೊಳ್ಳುತ್ತಿದ್ದಾರೆ.  ಭಾರತದ ರಾಷ್ಟ್ರೀಯ ಗಣಿತ ಒಲಂಪಿಯಾಡ್ ಸ್ಪರ್ಧೆಗಳು 1986ರಿಂದ ಪ್ರಾದೇಶಿಕ ಮತ್ತು ರಾಷ್ಟ್ರ ಮಟ್ಟದಲ್ಲಿ ಏರ್ಪಾಡಾಗುತ್ತಿವೆ.  ವಿವರಗಳಿಗೆ www.imo-official.org ಅಥವಾhttp://en.wikipedia.org/wiki/indian_national_mathematical_olympiad ಸಂಪರ್ಕಿಸಬಹುದು. ರಾಷ್ಟ್ರೀಯ ವಿಜ್ಞಾನ ಒಲಂಪಿಯಾಡ್‌ನ್ನು 3ರಿಂದ 12ನೇ ತರಗತಿವರೆಗಿನ ಮಕ್ಕಳಿಗೆ ನಡೆಸಲಾಗುತ್ತದೆ. ಪ್ರಥಮ ಹಂತದಲ್ಲಿ ಶಾಲೆಯಲ್ಲಿ ನಡೆಸಲಾಗುತ್ತದೆ. ಕನಿಷ್ಠ 50 ಮಕ್ಕಳು ನೋಂದಾಯಿಸಿಕೊಳ್ಳಬೇಕು. ನೋಂದಣಿಗಳನ್ನು ಶಾಲೆಗಳ ಮೂಲಕ ನಿಗದಿತ ಅರ್ಜಿ ನಮೂನೆಯಲ್ಲಿ ಕಳುಹಿಸಬೇಕಾಗುತ್ತದೆ. ಇದಕ್ಕೆ ಪೂರಕವಾದ ಮಾಹಿತಿ ಕೈಪಿಡಿ ಅಂತರ್ಜಾಲದಲ್ಲಿ ದೊರೆಯುತ್ತದೆ. ಗಮನಿಸಿ http://www.sofworld.org/html2003/htp.shtml.
ಪರೀಕ್ಷೆ ವೇಳಾಪಟ್ಟಿ
ವಿಜ್ಞಾನ (ಸಮಯ) ಬೆಳಿಗ್ಗೆ 10ರಿಂದ 11
ಗಣಿತ (ಸಮಯ) ಮಧ್ಯಾಹ್ನ 12ರಿಂದ 1
ಶಾಲಾ ಹಂತ
   31.8.2013
ತಾಲ್ಲೂಕು ಹಂತ
   21.9.2013
ಜಿಲ್ಲಾ ಹಂತ
   08.11.2013
ರಾಜ್ಯ ಹಂತ
   13.12.2013

Monday, June 24, 2013

ಎಲ್ಲಿ ಹೋದ್ರು ನಮ್ಮ ಮೇಸ್ಟ್ರು ಲೇಖನ ಈ ದಿನದ (24/6/13)ಪ್ರಜಾವಾಣಿಯ ಶಿಕ್ಷಣ ಪುರವಣಿಯಲ್ಲಿ


ಎಲ್ಲಿ ಹೋದ್ರು? ನಮ್ಮ ಮೇಷ್ಟ್ರು!

                     

ಶಾಲಾ ಶೈಕ್ಷಣಿಕ ವರ್ಷ ಪ್ರಾರಂಭವಾಗಿದೆ. ಮಕ್ಕಳ ಬದುಕು ಮತ್ತೆ ಹಿಂದಿನಂತೆ ಶಾಲೆ, ಪಾಠ, ಓದು-ಬರಹ, ಟ್ಯೂಷನ್, ಹೋಂವರ್ಕ್‌ನತ್ತ ವಾಲತೊಡಗಿದೆ. ಆದರೆ ಮಕ್ಕಳ ಭವಿಷ್ಯ ಅರಳಿಸುವ ಶಿಕ್ಷಕರನ್ನು ಯಾರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಶಿಕ್ಷಕರ ಕುರಿತ ನಮ್ಮ ನಿರ್ಲಕ್ಷ್ಯದಿಂದಾಗಿ, ಅವರ ಸಂಖ್ಯೆ ಹೆಚ್ಚಾದರೂ, ಮಕ್ಕಳಿಗೆ ನಿಜವಾದ ತಂದೆ, ತಾಯಿ, ಗುರುವಾಗಿ ಮಾರ್ಗದರ್ಶನ ನೀಡುವಂಥ ಉತ್ತಮ ಶಿಕ್ಷಕರು ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಲೇ ಇದ್ದಾರೆ. 
ಒಂದು ಕ್ಷಣ ಕಣ್ಣು ಮುಚ್ಚಿ ನಮ್ಮ ಬಾಲ್ಯದ ಅಥವಾ ಅದಕ್ಕಿಂತ ಹಿಂದಿನ ದಿನಗಳ ಶಿಕ್ಷಕರನ್ನು ನೆನೆಸಿಕೊಂಡರೆ ಮನಸ್ಸು ಪುಳಕಗೊಳ್ಳುತ್ತದೆ. ಅಂದು ಯಾವುದೇ ಸೌಲಭ್ಯಗಳಿಲ್ಲದೆ, ಗುಡಿಗಳಲ್ಲಿ ನಡೆಯುತ್ತಿದ್ದ ಶಾಲೆ, ಸೂಕ್ತ ಸಂಬಳ- ಸೌಕರ್ಯಗಳು ಇಲ್ಲದಿದ್ದರೂ ಗ್ರಾಮದವರು ನೀಡುತ್ತಿದ್ದ ಕಾಳು ಕಡ್ಡಿಗಳಿಂದಲೇ ಸಂತೃಪ್ತರಾಗಿ, ಮಕ್ಕಳ ಬದುಕನ್ನು ಹಸನುಗೊಳಿಸುತ್ತಿದ್ದ ಅಧ್ಯಾಪಕರು, ಗ್ರಾಮದ ಹಿರಿಯರಿಗೂ ಮಾರ್ಗದರ್ಶನ ಮಾಡುತ್ತಿದ್ದರು. ಅವರ ನಡೆ-ನುಡಿ ಒಂದೇ ಆಗಿತ್ತಲ್ಲದೆ ಸ್ವಾರ್ಥಕ್ಕೆ ಆಸೆ ಪಡದೆ, ಪ್ರಚಾರಕ್ಕೆ ಹಂಬಲಿಸದೆ ಬದುಕಿದ ರೀತಿಗೆ ಸರ್ವರೂ ವಿನಮ್ರರಾಗಿ ಅವರಿಗೆ ನೀಡುತ್ತಿದ್ದ ಗೌರವ ಕಣ್ಣಮುಂದೆ ಸಾಗಿ ಹೋಗುತ್ತವೆ.
ಆ ಮೇಷ್ಟ್ರುಗಳು ತಮ್ಮನ್ನು ಸಂಪೂರ್ಣವಾಗಿ ಗ್ರಾಮಕ್ಕೆ ಹಾಗೂ ಮಕ್ಕಳ ಶಿಕ್ಷಣಕ್ಕೆ ಅರ್ಪಿಸಿಕೊಳ್ಳುತ್ತಿದ್ದರು. ಬಡ ಮಕ್ಕಳನ್ನು ತಮ್ಮ ಮನೆಯಲ್ಲಿ ಇಟ್ಟುಕೊಂಡು ಓದಿಸುತ್ತಿದ್ದರು. ಮಕ್ಕಳ ಸಂಖ್ಯೆ ಹೆಚ್ಚಾದರೆ ಅವರಿಗಾಗಿ ಆಹಾರ- ದಿನಸಿ- ತರಕಾರಿ- ಪೈಸೆಯನ್ನು ಭಿಕ್ಷೆ ಬೇಡಿ ತಂದು ಓದಿಸಿದ ಸಾಕಷ್ಟು ಉದಾಹರಣೆಗಳು ಆತ್ಮಕಥೆಗಳಲ್ಲಿ ದಾಖಲಾಗಿವೆ. ಶಿಕ್ಷಕರು ತಮ್ಮ ವೃತ್ತಿ ಬಗ್ಗೆ ಹೊಂದಿದ್ದ ಅಪಾರ ಗೌರವವೇ ಅವರನ್ನು ಇತರರು ಗೌರವಿಸುವಂತೆ ಇತ್ತು. ಆದರೆ ಇಂದಿನ ಶಿಕ್ಷಕರಿಗೂ ಆ ಮೇಷ್ಟ್ರಿಗೂ ಅಜಗಜಾಂತರ ವ್ಯತ್ಯಾಸ. ಇಂದು ಶಾಲೆಯಲ್ಲಿ ಎಲ್ಲ ರೀತಿಯ ಸೌಕರ್ಯಗಳಿವೆ. ಶಿಕ್ಷಕರಿಗೆ ಉತ್ತಮ ವೇತನ ದೊರೆಯುತ್ತಿದ್ದರೂ ಸಮಾಜದಲ್ಲಿ ಗೌರವ ಕಡಿಮೆಯಾಗುತ್ತಿದೆ. `ಶಿಕ್ಷಕ ಗೌರವ ಸಿಗಬೇಕೆಂದು ಬಯಸುವುದಾದರೆ ಆತ ಗೌರವಕ್ಕೆ ಅರ್ಹನಾಗಿರಬೇಕು' ಎಂಬ ಅರವಿಂದ ಘೋಷ್ ಅವರ ಮಾತು ಇಲ್ಲಿ ಹೆಚ್ಚು ಮಹತ್ವ ಪಡೆಯುತ್ತದೆ. ಏಕೆಂದರೆ ಇತ್ತೀಚೆಗೆ ರಾಷ್ಟ್ರೀಯ ದಿನಪತ್ರಿಕೆ ಯೊಂದು ಸಮೀಕ್ಷಾ ವರದಿಯನ್ನು ಪ್ರಕಟಿಸಿತು. ಅದರ ಪ್ರಕಾರ, ಪ್ರಸ್ತುತ ಶಿಕ್ಷಕ ವೃತ್ತಿಗೆ ಬಂದಿರುವ ಶೇ 83ರಷ್ಟು ಮಂದಿಗೆ ತಮ್ಮ ಕಾಯಕದ ಬಗ್ಗೆ ಗೌರವವೇ ಇಲ್ಲ ಎಂಬ ಆಘಾತಕಾರಿ ಅಂಶ ಅದರಿಂದ ಹೊರಬಿದ್ದಿದೆ. ಹಾಗಾದರೆ ಇದರ ಪರಿಣಾಮ?
ಅಂದಿನ ಮೇಷ್ಟ್ರುಗಳು ಇಂದಿಗೂ ನಮಗೆ ಮಾದರಿಯಾಗಿದ್ದಾರೆ ಎಂದರೆ ಅದಕ್ಕೆ ಒಂದೆರಡು ಕಾರಣಗಳಿಲ್ಲ. ಅತ್ಯಂತ ಶಿಸ್ತುಬದ್ಧವಾಗಿ ನಡೆಸಿದ ಜೀವನ ಶೈಲಿ, ದಕ್ಷತೆಯಿಂದ ಮಕ್ಕಳಿಗೆ ಕಲಿಸುತ್ತಿದ್ದ ರೀತಿ, ತಮ್ಮ ಧ್ಯೇಯಗಳಿಗೆ ವಿರುದ್ಧವಾಗಿ ಯಾವುದೇ ರಾಜಿಗೆ ಅವಕಾಶ ನೀಡದಿರುವುದು, ಯಾವುದೇ ಹಿನ್ನೆಲೆಯ ಮಗುವಾಗಿದ್ದರೂ ಸಮಾನವಾಗಿ ಕಾಣುತ್ತಿದ್ದ ದೃಷ್ಟಿಕೋನ, ಜೀವನದ ಪ್ರತಿ ನಡೆಯಲ್ಲೂ ಪಾವಿತ್ರ್ಯ ಕಾಪಾಡಿಕೊಳ್ಳುವುದು... ಇಂತಹ ಸೂಕ್ಷ್ಮ ಅಂಶಗಳು ಇದ್ದುದರಿಂದ ಅವರ ಮೇಲೆ ಮಕ್ಕಳಿಗೆ ಸಹಜವಾಗಿಯೇ ಪೂಜ್ಯ ಭಾವನೆ ಇಮ್ಮಡಿಗೊಳ್ಳುತ್ತಿತ್ತು.
ತರಗತಿ ಬೋಧನೆಯಲ್ಲಿ ಅವರು ತೊಡಗಿಕೊಂಡಾಗ ಎಲ್ಲ ವಿಷಯಗಳೂ ಕರತಲಾಮಲಕ ಆಗಿರುತ್ತಿದ್ದವು. ಅದಕ್ಕಾಗಿ ಹೆಚ್ಚಿನ ಕಾಲ ಅಧ್ಯಯನ ಮಾಡುತ್ತಾ ಪೂರ್ವ ಸಿದ್ಧತೆ ಮಾಡಿಕೊಂಡು ಬರುತ್ತಿದ್ದರು. ಬೋಧನೆ ಯನ್ನು ವಿಶೇಷವಾಗಿ ಪರಿಗಣಿಸುತ್ತಿದ್ದರು. ಸಾಮಾನ್ಯವಾಗಿ ಅವರೆಲ್ಲರಲ್ಲೂ ಇದ್ದ ಬಹು ದೊಡ್ಡ ಹವ್ಯಾಸವೆಂದರೆ ಪುಸ್ತಕಗಳನ್ನು ಓದುವುದು. ಪಠ್ಯಕ್ಕೆ ಪೂರಕ ಹಾಗೂ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಆಸಕ್ತರಾಗಿದ್ದರು. ಅದರಲ್ಲೂ ಹಳಗನ್ನಡ ಪದ್ಯಗಳನ್ನು ಪಟಪಟನೆ ಹೇಳುತ್ತಿದ್ದ ಶೈಲಿ ಇಂದಿಗೂ ನನ್ನ ಮನದಲ್ಲಿ ಮನೆ ಮಾಡಿದೆ. ಹೆಚ್ಚು ಹೆಚ್ಚು ಓದಿಕೊಂಡು ಹೊಸ ಜ್ಞಾನಭಂಡಾರದ ಒಡೆಯರಾಗಿದ್ದರು. ಅದನ್ನು ಸಾಂದರ್ಭಿಕವಾಗಿ ಬೋಧನೆಯಲ್ಲಿ ಬಳಸಿಕೊಂಡು ಮಕ್ಕಳಿಗೂ ಸಾಹಿತ್ಯದ ರುಚಿ ಹತ್ತಿಸುತ್ತಿದ್ದರು. ಓದಿನಿಂದ ಸಿಗುವ ಆನಂದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂಬುದನ್ನು ಮಕ್ಕಳು ಮನಗಾಣುವಂತೆ ಮಾಡುತ್ತಿದ್ದರು. ಈ ತರಹ ನಾನಾ ಮಜಲುಗಳಿಂದ ಮಾಹಿತಿ ಸಂಗ್ರಹಿಸಿ ವಿಷಯಗಳ ಮೇಲೆ ಪ್ರಭುತ್ವ ಪಡೆದು ಆತ್ಮವಿಶ್ವಾಸದಿಂದ ಮುನ್ನಡೆಯುತ್ತಿದ್ದರು.
ಶಾಲಾ ಸಮಯದಲ್ಲಿ ಇತರ ಕೆಲಸ ಮಾಡಲು ಅವರು ಎಂದೂ ಯೋಚಿಸುತ್ತಿರಲಿಲ್ಲ. ಶಾಲಾ ಸಮಯ ಅಮೂಲ್ಯ ಎಂದರಿತು ಅದರ ಗರಿಷ್ಠ ಅನುಕೂಲ ಮಕ್ಕಳಿಗೆ ಸಿಗಲು ಶ್ರಮಿಸುತ್ತಿದ್ದರು. ಶಾಲೆ ತಪ್ಪಿಸುವುದು ಅಥವಾ ಆರ್ಥಿಕ ಲಾಭದ ಕೆಲಸಗಳಿಗೆ ಯಾವತ್ತೂ ಅವರು ಮನಸ್ಸು ಮಾಡಲಿಲ್ಲ. ಪ್ರತಿದಿನ ಹಾಜರಾಗಿ ಬೋಧಿಸಿದಾಗ ಮಾತ್ರ, ಮಗು ಶಾಲೆ ಬಿಡಲು ಮುಂದಾದರೆ ಅದನ್ನು ತಡೆಯುವ ನೈತಿಕ ಹಕ್ಕು ನನಗೆ ಬರುತ್ತದೆ ಎಂಬುದನ್ನು ಅರಿತಿದ್ದರು. ಅದನ್ನು ಅಕ್ಷರಶಃ ಪಾಲಿಸುತ್ತಿದ್ದರು.
ಆದರೆ ಈಗಿನ ಶಿಕ್ಷಕರು ಈ ಎಲ್ಲ ಕೆಲಸಗಳನ್ನೂ ಮಾಡುತ್ತಿಲ್ಲವೇ ಎಂದು ಕೇಳಿದರೆ ಉತ್ತರ ಬಹುತೇಕ `ಇಲ್ಲ' ಎಂದೇ ಆಗಿರುತ್ತದೆ. ಯಾಕೆಂದರೆ ನಮ್ಮ ಶಿಕ್ಷಕರಿಗೆ ಸಮಯವೇ ಸಿಗುತ್ತಿಲ್ಲ. ಅವರು ವಿಪರೀತ ಕೆಲಸದ ಒತ್ತಡದಿಂದ ಕಂಗಾಲಾಗಿದ್ದಾರೆ. ಸರಿಯಾಗಿ ಪಾಠ ಮಾಡಲೂ ಬಿಡುವು ಸಿಗದೆ ಒದ್ದಾಡುತ್ತಿದ್ದಾರೆ. ಪಾಠದ ಹೊರತಾಗಿ ಇತರ ಎಲ್ಲ ಕೆಲಸಗಳನ್ನೂ ಅವರ ತಲೆಗೆ ಕಟ್ಟಲಾಗುತ್ತಿದೆ. ದಾಖಲೆ ನಿರ್ವಹಣೆಯೇ ಅವರ ಪ್ರಮುಖ ಕಾರ್ಯವಾಗಿದೆ. ಸಮಾಜದಲ್ಲಿ ಮೊದಲೇ ವೃತ್ತಿಗೌರವ ಕಡಿಮೆ ಆಗುತ್ತಿರುವಾಗ ಈ ತೆರನಾದ ವ್ಯವಸ್ಥೆಯಿಂದ ಶಿಕ್ಷಕರು ಮತ್ತಷ್ಟು ಕುಗ್ಗಿ ಹೋಗಿದ್ದಾರೆ. ಕೆಲವೇ ಶಿಕ್ಷಕರು ಸಮಯ ಹೊಂದಾಣಿಕೆ ಮಾಡಿಕೊಂಡು, ದಾಖಲೆ ನಿರ್ವಹಣೆ ಜೊತೆಗೆ ಉತ್ತಮ ಬೋಧನಾ ಕಾರ್ಯ ಕೈಗೊಳ್ಳುತ್ತಾ, ಜಡ್ಡುಗಟ್ಟಿದ ವ್ಯವಸ್ಥೆಯನ್ನು ಮೀರಿ ಉತ್ತಮ ಶಿಕ್ಷಕರು ಎನಿಸಿಕೊಳ್ಳುತ್ತಿದ್ದಾರೆ. ಇನ್ನು ಕೆಲವರು ಹಣದ ಹಿಂದೆ ಹೋಗಿ ಶಾಲೆಗಿಂತ ಮನೆ ಪಾಠಕ್ಕೆ ಆದ್ಯತೆ ನೀಡುತ್ತಿರುವುದು ಗುಟ್ಟೇನಲ್ಲ. ಉಳಿದವರು, ನಮಗ್ಯಾಕೆ ಇಲ್ಲದ ಉಸಾಬರಿ ಎಂದು ದಿನ ನೂಕುತ್ತಿದ್ದಾರೆ. ಆ ಶಿಕ್ಷಕರಿಗೆ ಸಾಧ್ಯವಾಗುವುದಾದರೆ ಉಳಿದವರಿಗೇಕೆ ಅಸಾಧ್ಯ ಎಂಬುದು ಯಕ್ಷ ಪ್ರಶ್ನೆಯಾಗಿಯೇ ಉಳಿಯುತ್ತದೆ.
ಶಿಕ್ಷಕರು ಇಂದು ಬೋಧನೆ- ಕಲಿಕಾ ಪ್ರಕ್ರಿಯೆಗಳಿಗಿಂತ ಬೇರೆ ಚಟುವಟಿಕೆಗಳತ್ತ ಹೆಚ್ಚು ಆಸಕ್ತರಾಗಿದ್ದಾರೆ ಎಂಬ ದೂರಿದೆ. ಇದಕ್ಕೆ ಪ್ರಮುಖ ಕಾರಣ ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಾಚಾರ ತನ್ನ ಕೆನ್ನಾಲಿಗೆ ಚಾಚುತ್ತಿರುವುದು. ಶಿಕ್ಷಕರು ತಮಗೆ ಸಿಗಬೇಕಾದ ಸೌಲಭ್ಯ ಪಡೆಯಲು, ಅದರಲ್ಲೂ ಕೆಲವೆಡೆ ವೇತನಕ್ಕಾಗಿ ಸಾಮಾನ್ಯ ಗುಮಾಸ್ತನಿಂದ ಎಲ್ಲರ ಕೈ ಬೆಚ್ಚಗೆ ಮಾಡಬೇಕು. ಇಲ್ಲದಿದ್ದರೆ ಕೆಲಸ ಆಗುವುದಿಲ್ಲ. ಉನ್ನತ ಹಂತದ ಅಧಿಕಾರಿಗಳಿಗೆ ಇದು ಗೊತ್ತಿದ್ದರೂ ಏನೂ ಮಾಡಲಾರದಂತಹ ಸ್ಥಿತಿ. ಶಿಕ್ಷಕರು ಸಂಬಳದಿಂದಲೇ ತಮ್ಮ ಬದುಕು ಸಾಗಿಸಬೇಕು. ಹಾಗಾಗಿ ಅವರು ಇತರ ಆದಾಯದ ಮೂಲಗಳತ್ತ ಸಾಗುವಂತಾಗಿದೆ. ಇದನ್ನು ಕೆಲ ಶಿಕ್ಷಕರು ಅಸ್ತ್ರವಾಗಿಸಿಕೊಂಡು ತಮ್ಮ ಶಿಕ್ಷಕ ವೃತ್ತಿಯನ್ನೇ ಪ್ರವೃತ್ತಿಯನ್ನಾಗಿಸಿ, ಇತರ ಆದಾಯದ ಕೆಲಸಗಳನ್ನೇ ಪ್ರಮುಖವಾಗಿಸಿಕೊಂಡಿದ್ದಾರೆ. 
ಇವರೆಲ್ಲರೂ ನಮ್ಮ ಹಿಂದಿನ ದಿನಗಳ ಮೇಷ್ಟ್ರುಗಳನ್ನ ಒಂದು ಕ್ಷಣ ನೆನಪು ಮಾಡಿಕೊಳ್ಳಬೇಕು. ಬಿಜಾಪುರದ ಇಂಡಿ ಮಾರ್ಗದಲ್ಲಿ ಬರುವ ಅಥರ್ಗಾ ಗ್ರಾಮದಲ್ಲಿ `ಶ್ರೀ ರೇವಣಸಿದ್ಧಪ್ಪ ಮಾಸ್ತರ'ರಿಗೆ ದೇವಾಲಯವನ್ನು ನಿರ್ಮಿಸಲಾಗಿದ್ದು, ಪ್ರತಿ ದಿನ ಪೂಜೆ ನಡೆಯುತ್ತದೆ. ಅಲ್ಲದೆ ಪಲ್ಲಕ್ಕಿ ಉತ್ಸವ, ಜಾತ್ರೆ, ಮಾದರಿ ಗ್ರಂಥಾಲಯವನ್ನು ನಡೆಸುತ್ತಿರುವುದು ಈ ರೀತಿ ಉಡಾಫೆಯಾಗಿ ಮಾತನಾಡುವವರಿಗೆ ತಕ್ಕ ಉತ್ತರದಂತಿದೆ.
ಶಿಕ್ಷಕರ ಪ್ರತಿ ನಡೆಯೂ ಬಹು ಮುಖ್ಯ. ಅವರು ತಪ್ಪು ಮಾಡಿದರೆ ಮಕ್ಕಳ ಭವಿಷ್ಯ ಕಮರಲೂ ಬಹುದು. ಪ್ರತಿ ದಿನ ತರಗತಿಯಲ್ಲಿ ನನ್ನ ಮಕ್ಕಳಿಗೆ ನಾನು ನ್ಯಾಯ ಒದಗಿಸುತ್ತಿರುವೆನೇ ಎಂಬ ಬಗ್ಗೆ ಶಿಕ್ಷಕರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ನಡೆದ ಹಾದಿಯ ಸರಿ-ತಪ್ಪುಗಳು ಗಮನಕ್ಕೆ ಬಾರದಂತಾಗುತ್ತವೆ. ತಪ್ಪುಗಳನ್ನು  ಗುರುತಿಸಿಕೊಂಡು ಸಕಾರಾತ್ಮಕವಾಗಿ ಚಿಂತಿಸಿ ಉತ್ತಮ ಗುರಿಯತ್ತ ಪ್ರಾಮಾಣಿಕವಾಗಿ ಮುನ್ನುಗ್ಗಿದರೆ ಶಿಕ್ಷಕರ ಸ್ಥಾನಮಾನದ ಜೊತೆಗೆ ಬೋಧನೆಯೂ ಉನ್ನತ ಮಟ್ಟಕ್ಕೆ ಏರುತ್ತದೆ. ಇದನ್ನೇ ಮಕ್ಕಳು, ಪೋಷಕರು, ಸಮಾಜ ಅವರಿಂದ ಆಶಿಸುತ್ತಿದೆ.
ರವೀಂದ್ರನಾಥ ಟ್ಯಾಗೋರ್, ಡಾ. ಎಸ್.ರಾಧಾಕೃಷ್ಣನ್, ಡಾ. ಎಚ್. ನರಸಿಂಹಯ್ಯ, ರಾಜರತ್ನಂ, ದ.ರಾ.ಬೇಂದ್ರೆ, ಬಿ.ಎಂ.ಶ್ರೀ, ಟಿ.ಎಸ್. ವೆಂಕಣ್ಣಯ್ಯ, ಪಂಜೆ ಮಂಗೇಶರಾಯ, ಕೃಷ್ಣಮೂರ್ತಿ ಪುರಾಣಿಕ್, ತಮ್ಮಣ್ಣ ಮಾಸ್ತರ್, ಬೆಳಗೆರೆ ಕೃಷ್ಣಶಾಸ್ತ್ರಿ, ಎಂ.ಆರ್.ಎನ್., ಎನ್. ಕಾಳೇಶ್ವರ ರಾವ್, ಡಾ. ಎನ್.ಗಣನಾಥ, ಜಿ.ಎಸ್.ಜಯದೇವ್ ಮುಂತಾದವರೆಲ್ಲರೂ ಮಕ್ಕಳ ಮನಸ್ಸಿನಲ್ಲಿ ಅಳಿಸಲಾಗದ ಛಾಪನ್ನು ಒತ್ತಿದ್ದಾರೆ. ಅದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಮತ್ತು ಕೋಟಿ ಕೊಟ್ಟರೂ ದೊರೆಯುವುದಿಲ್ಲ. ಇವರೆಲ್ಲರೂ ತಮ್ಮ ವಿದ್ಯಾರ್ಥಿಗಳನ್ನು ಪ್ರೀತಿಸಿದರು, ವಿಷಯಗಳನ್ನು ಆರಾಧಿಸಿದರು, ವೃತ್ತಿಯನ್ನು ಎತ್ತರಕ್ಕೆ ಕೊಂಡೊಯ್ದರು. ಹಾಗಾಗಿ ಮಕ್ಕಳ ಬಾಳಿಗೆ ಬೆಳಕಾದರು.

Tuesday, May 14, 2013

sslc &puc ನಂತರ ಮುಂದೆ ಇರುವ ಅವಕಾಶಗಳ ಕುರಿತ ಲೇಖನ ಪ್ರಜಾವಾಣಿಯ (13/5/13) ಶಿಕ್ಷಣ ಪುರವಣಿಯಲ್ಲಿ ಓದಿ



ಇಗೋ ಇಲ್ಲಿದೆ ಅವಕಾಶ

ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿರುವ ಆದರ್ಶನಿಗೆ ಪಿ.ಯು.ಸಿ.ಯಲ್ಲಿ ವಿಜ್ಞಾನ ವಿಭಾಗವನ್ನು ಆಯ್ಕೆ ಮಾಡಿಕೊಂಡು ಅಭ್ಯಾಸ ಮಾಡಿದರೆ ಸಿ.ಇ.ಟಿ.ಯಲ್ಲಿ ಉತ್ತಮ ಸ್ಥಾನ ಸಿಗುವುದಿಲ್ಲ, ಜೊತೆಗೆ ಆ ಒತ್ತಡವನ್ನು ತಡೆಯಲು ಆಗುವುದಿಲ್ಲವೇನೋ ಎಂಬ ಅನುಮಾನ. ಅದಕ್ಕೆ ಅವನು, ಮೂರು ವರ್ಷದ ಡಿಪ್ಲೊಮಾ ಮಾಡಿಕೊಂಡರೆ ಮುಂದೆ ಎಂಜಿನಿಯರಿಂಗ್ ಸೀಟು ಗ್ಯಾರಂಟಿ ಮತ್ತು ಒಂದು ವರ್ಷ ರಿಯಾಯಿತಿ ತೆಗೆದುಕೊಂಡು ಸೀದಾ ಎರಡನೇ ವರ್ಷಕ್ಕೆ ಪ್ರವೇಶ ಪಡೆಯಬಹುದು ಎಂಬ ಯೋಜನೆಯಲ್ಲಿದ್ದಾನೆ.
ಸುಮಾ ಹೇಳುತ್ತಾಳೆ `ವಿಜ್ಞಾನ ವಿಭಾಗದಲ್ಲಿ ಹೆಚ್ಚಿನ ಕೆಲಸದಿಂದಾಗಿ ಒತ್ತಡ ಉಂಟಾಗುತ್ತದೆ. ಕಾಮರ್ಸ್‌ನಲ್ಲಿ ಆ ಒತ್ತಡ ಕಡಿಮೆ. ನಂತರ ಬಿ.ಬಿ.ಎಂ., ಎಂ.ಬಿ.ಎ. ಮಾಡುತ್ತೇನೆ. ಜೊತೆಗೆ ಕಂಪ್ಯೂಟರ್ ಕೋರ್ಸ್. ಅದರಲ್ಲಿ ಟ್ಯಾಲಿ ಕಲಿತರೆ ಸಿ.ಎ. ಮಾಡುವುದು ಕೂಡಾ ಸುಲಭ. ಹಾಗಾಗಿ ನನಗೆ ಕಲೆ ಹಾಗೂ ವಿಜ್ಞಾನ ಎರಡೂ ಬೇಡ'.
ನೇಹಾಳದು ಮತ್ತೊಂದು ದಾರಿ. `ಇಂಗ್ಲಿಷ್‌ಗೆ ಇಂದು ಹೆಚ್ಚು ಪ್ರಾಧಾನ್ಯತೆ ಸಿಗುತ್ತಿದೆ. ಅದಕ್ಕೆ ಇಂಗ್ಲಿಷ್ ಮೇಜರ್, ಕಮ್ಯುನಿಕೇಟಿವ್ ಇಂಗ್ಲಿಷ್, ಫಂಕ್ಷನಲ್ ಇಂಗ್ಲಿಷ್ ಮಾಡಿ, ಮುಂದೆ ಬಿ.ಇಡಿ., ಎಂ.ಇಡಿ. ಮಾಡಿದರೆ ಕೆಲಸವೂ ಖಾತ್ರಿ, ಟ್ಯೂಷನ್ ಮಾಡಿಯೂ ಬದುಕಬಹುದಲ್ಲ' ಎಂದು ಅಭಿಪ್ರಾಯ ಪಡುತ್ತಾಳೆ. 
ಪಿಯುಸಿ ಪರೀಕ್ಷೆ ಬರೆದಿರುವ ಶಿವಪ್ರಕಾಶನಿಗೆ `ಟೆಕ್ನಿಕಲ್ ಕೋರ್ಸ್‌ಗಿಂತ ಲೈಫ್ ಸೈನ್ಸ್‌ಗೆ ಹೆಚ್ಚು ಬೇಡಿಕೆ ಇದೆಯಂತೆ. ಅದಕ್ಕೆ ಬಯೊ ಟೆಕ್ನಾಲಜಿ, ಬಯೊ ಇನ್‌ಫರ್ಮೆಟಿಕ್ಸ್, ಅಗ್ರಿಕಲ್ಚರ್ ಯಾವುದಾದರೂ ಮಾಡಲು ಸಿದ್ಧ. ಅವು ಓದಲು ಸುಲಭ ಹಾಗೂ ಒತ್ತಡ ಕಡಿಮೆ' ಎಂಬ ಮನೋಭಾವ.
ಇತ್ತೀಚಿನ ದಿನಗಳಲ್ಲಿ ನಮ್ಮ ಸುತ್ತಮುತ್ತಲಿನ ಮಕ್ಕಳೆಲ್ಲರೂ ಈ ರೀತಿ ನಾನಾ ಬಗೆಯ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಅವರು ತಮ್ಮ ಮುಂದಿನ ದಾರಿ ಯಾವುದು, ಎತ್ತ ಕಡೆ ಪಯಣ ಎಂಬ ಪ್ರಶ್ನೆ ಎದುರಾದಾಗ, ತಮ್ಮ ಆಸಕ್ತಿ, ಪಾಲಕರ ಆದಾಯ... ಇತ್ಯಾದಿಗಳನ್ನು ಗಮನಿಸಿ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳುತ್ತಿರುವ ಸಂಪ್ರದಾಯ ನಿಧಾನವಾಗಿ ಬೆಳೆಯುತ್ತಿದೆ.
ಹಿಂದೆಲ್ಲ ಈ ಬಗೆಯಲ್ಲಿ ವಿವಿಧ ಆಸಕ್ತಿಗಳಿಗೆ ಅನುಗುಣವಾದ ಬಗೆಬಗೆಯ ಕೋರ್ಸ್‌ಗಳಿರಲಿಲ್ಲ. ಎಸ್ಸೆಸ್ಸೆಲ್ಸಿ, ಪಿಯುಸಿ, ನಂತರ ಪದವಿ, ಶಿಕ್ಷಕರ ತರಬೇತಿ, ಎಂ.ಎ. ಎಂಬುದು ಒಂದು ಬಗೆಯ ದಾರಿಯಾಗಿತ್ತು. ಅದು ಬಿಟ್ಟರೆ ಲಾ, ಎಂಜಿನಿಯರಿಂಗ್, ಮೆಡಿಕಲ್ ಎಂಬ ಇನ್ನೊಂದು ದಾರಿ ಮಾತ್ರ ಸಿಗುತ್ತಿತ್ತು. ಆದರೆ ಇಂದು ಸಾಕಷ್ಟು ಬದಲಾಗಿದೆ. ಹಾಗಾಗಿ ಮಕ್ಕಳು ಮತ್ತು ಪೋಷಕರು ಯಾವುದಕ್ಕೆ ಸೇರಿದರೆ ಹೆಚ್ಚು ಅನುಕೂಲ, ತಕ್ಷಣ ಲಾಭ ಸಿಗುತ್ತದೆ ಎಂಬುದನ್ನು ಮುಖ್ಯವಾಗಿ ಪರಿಗಣಿಸುತ್ತಿದ್ದಾರೆ. ಹಾಗಾಗಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ನಂತರ ಇರುವ ಅವಕಾಶಗಳತ್ತ ಒಮ್ಮೆ ದೃಷ್ಟಿ ಹಾಯಿಸಿದಾಗ ಸಾಕಷ್ಟು ಆಯ್ಕೆಗಳು ನಮಗೆ ಕಾಣಿಸುತ್ತವೆ.
ಎಸ್ಸೆಸ್ಸೆಲ್ಸಿ ನಂತರ...
ಎಸ್ಸೆಸ್ಸೆಲ್ಸಿ ಉತ್ತೀರ್ಣರಾದವರಿಗಾಗಿ ಪದವಿ ಪೂರ್ವ ಮತ್ತು ವೃತ್ತಿ ಶಿಕ್ಷಣ ಇಲಾಖೆಗಳು ತಮ್ಮ ವೆಬ್‌ಸೈಟ್‌ನಲ್ಲಿ ಪದವಿ ಪೂರ್ವ ಶಿಕ್ಷಣದ ಎಲ್ಲ ವಿಭಾಗಗಳನ್ನೂ ಪ್ರಕಟಿಸಿವೆ. ಕಲಾ ವಿಭಾಗದಲ್ಲಿ 42, ವಾಣಿಜ್ಯ ವಿಭಾಗದಲ್ಲಿ 8 ಮತ್ತು ವಿಜ್ಞಾನ ವಿಭಾಗದಲ್ಲಿ 6 ಬಗೆಯ ಆಸಕ್ತಿಗೆ ಅನುಗುಣವಾದ ಕಾಂಬಿನೇಷನ್‌ಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಇದೆ. (ಗಮನಿಸಿ- www.pue.kar.nic.in)
ಮೂರು ವರ್ಷದ ಡಿಪ್ಲೊಮಾ ಕೋರ್ಸ್‌ನಲ್ಲಿ 26 ವಿಭಾಗಗಳಲ್ಲಿ ಅಧ್ಯಯನ ಮಾಡಬಹುದು. ಇನ್ನು ಪ್ಯಾರಾ ಮೆಡಿಕಲ್ ಡಿಪ್ಲೊಮಾ ಕೋರ್ಸ್‌ನಲ್ಲಿ ಆರು ವಿಭಾಗಗಳಿವೆ. ಒಂದು ವರ್ಷದ ಎ.ಎನ್.ಎಂ. ಸರ್ಟಿಫಿಕೇಟ್ ಕೋರ್ಸ್, ಆರೋಗ್ಯ ನಿರೀಕ್ಷಕರ ಕೋರ್ಸ್, ನರ್ಸಿಂಗ್ ಜನರಲ್, ನರ್ಸಿಂಗ್ ಡಿಪ್ಲೊಮಾ  ಮುಂತಾದ ಅವಕಾಶಗಳಿವೆ (ಗಮನಿಸಿ-www.ksdned.org)ಈ ಆರೋಗ್ಯ ಕ್ಷೇತ್ರದಲ್ಲೇ ತಪಾಸಣೆ, ರೋಗ ವಿಧಾನ, ಸಂವಹನ, ಕೌನ್ಸೆಲಿಂಗ್, ನರ್ಸಿಂಗ್, ಫಾರ್ಮಸಿ, ರೇಡಿಯಾಲಜಿ ಕ್ಷೇತ್ರಗಳಲ್ಲಿ ಸರ್ಟಿಫಿಕೇಟ್/ ಡಿಪ್ಲೊಮಾ ಕೋರ್ಸ್‌ಗಳಿವೆ (ಗಮನಿಸಿ-www.pmbkarnataka.org) ಎರಡು ವರ್ಷಗಳ ಐ.ಟಿ.ಐ.ನಲ್ಲಿ 34 ವಿಭಾಗಗಳಿವೆ. (ಗಮನಿಸಿ-www.karnatakaeducation.net).ಇವುಗಳ ಹೊರತಾಗಿ ನಾನಾ ಬಗೆಯ ಕ್ರಾಷ್ ಕೋರ್ಸ್‌ಗಳಿವೆ. ಆಸಕ್ತಿಗೆ ಅನುಗುಣವಾಗಿ ಹುಡುಕುವ ಅಭ್ಯಾಸ ರೂಢಿಸಿಕೊಳ್ಳಬೇಕಷ್ಟೆ.
ವೃತ್ತಿ ಕೌಶಲ
ಕೇಂದ್ರ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಇಲಾಖೆ ಅಡಿ 14 ವರ್ಷ ಮೇಲ್ಪಟ್ಟವರಿಗಾಗಿ ಮಾಡ್ಯುಲಾರ್ ಎಂಪ್ಲಾಯಬಲ್ ಸ್ಕಿಲ್ಸ್‌ನಲ್ಲಿ ಗೃಹಾಧಾರಿತ ಸೇರಿದಂತೆ ಒಟ್ಟು 1252 ವಿವಿಧ ಬಗೆಗಳಲ್ಲಿ ತರಬೇತಿ ನೀಡಿ ಕೌಶಲವನ್ನು ವೃದ್ಧಿಸಲಾಗುತ್ತಿದೆ. ಅದು ಸ್ವ ಉದ್ಯೋಗ ಕೈಗೊಳ್ಳಲು ಹೆಚ್ಚಿನ ಬೆಂಬಲ ನೀಡುತ್ತದೆ (ಗಮನಿಸಿ- www.koushalyasiri.in http://dget.gov.in/ )
ಬಗೆ ಬಗೆ ಆಯ್ಕೆ...
ಪದವಿ ಪೂರ್ವ ಶಿಕ್ಷಣ ಮಕ್ಕಳ ಬದುಕಿನ ಮಹತ್ತರವಾದ ಘಟ್ಟ. ಅಲ್ಲಿಂದ ಮಕ್ಕಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಆರಂಭಿಸುತ್ತಾರೆ. ದ್ವಿತೀಯ ಪಿಯುಸಿಯಲ್ಲಿ ಗಳಿಸುವ ಅಂಕಗಳು ಹಾಗೂ ಅವರವರ ಆಸಕ್ತಿಗೆ ಅನುಗುಣವಾಗಿ ಮುಂದಿನ ವಿದ್ಯಾಭ್ಯಾಸ ನಿರ್ಧಾರವಾಗುತ್ತದೆ. ಇದುವರೆಗೂ ಪಿಯುಸಿ ನಂತರ ಎಂಜಿನಿಯರಿಂಗ್, ವೈದ್ಯಕೀಯದಂತಹ ಕೆಲವೇ ವಿಭಾಗಕ್ಕೆ ವಿದ್ಯಾರ್ಥಿಗಳು ಸೀಮಿತವಾಗುತ್ತಿದ್ದರು. ಆದರೆ ಈಗ ಪಿಯುಸಿ ನಂತರ 300ಕ್ಕೂ ಹೆಚ್ಚಿನ ವಿವಿಧ ವಿಷಯಗಳ ಅಧ್ಯಯನದ ಅವಕಾಶ ನಮ್ಮ ರಾಜ್ಯದ ಮಕ್ಕಳಿಗೆ ದೊರಕುತ್ತಿದೆ. ಅವುಗಳಲ್ಲಿ ಉತ್ತಮವಾದುದನ್ನು ಆಯ್ಕೆ ಮಾಡಿಕೊಳ್ಳಬೇಕಾದ ಜಾಣ್ಮೆ ಅವರಲ್ಲಿ ಇರಬೇಕು.
ಪಿಯುಸಿಯ ಸಾಮಾನ್ಯ ವಿಜ್ಞಾನದಲ್ಲಿ ಉತ್ತೀರ್ಣರಾದವರಿಗೆ ಸುಮಾರು 90 ಬಗೆಯ ವಿಷಯಗಳಿದ್ದು, ಮೂರು ವರ್ಷದಲ್ಲಿ ಆರು ಸೆಮಿಸ್ಟರ್‌ನ ಪದವಿ ಅಥವಾ ಐದು ವರ್ಷಗಳ ಇಂಟಿಗ್ರೇಟೆಡ್ ಪಿ.ಜಿ. ಮಾಡಲು ಅವಕಾಶವಿದೆ. ಸಿ.ಇ.ಟಿ. ಆಧಾರದ ಮೇಲೆ ವೈದ್ಯಕೀಯ, ಎಂಜಿನಿಯರಿಂಗ್ ಇತ್ಯಾದಿಗಳ ವಿವರ ಎಲ್ಲರಿಗೂ ತಿಳಿದಿರುವ ಸಂಗತಿ (ಗಮನಿಸಿ-www.cetkarnataka.in ) ಅದೇ ರೀತಿ ಕಾಮರ್ಸ್ ಮಾಡಿದವರು ಬಿ.ಕಾಂ., ಬಿ.ಬಿ.ಎಂ., ಎಂ.ಬಿ.ಎ., ಸಿ.ಎ., ಸಿ.ಎಫ್.ಎ., ಡಿ.ಡಬ್ಲ್ಯು.ಎ., ಸಿ.ಎಸ್. ಮೊದಲಾದವಕ್ಕೆ ಈಗ ಬೇಡಿಕೆ ಹೆಚ್ಚಾಗುತ್ತಿರುವುದನ್ನು ಗಮನಿಸಬಹುದು.
ಕಲಾ ವಿಭಾಗದಲ್ಲಿ ಭಾಷೆ, ಐಚ್ಛಿಕ ವಿಷಯಗಳ ಪದವಿ, ಸ್ನಾತಕೋತ್ತರ ಪದವಿ ಸೇರಿದಂತೆ ಹೊಸದಾಗಿ ಇಂಟಿಗ್ರೇಟೆಡ್ ಕೋರ್ಸ್‌ಗಳು ಸೇರಿಕೊಂಡಿವೆ. ಪತ್ರಿಕೋದ್ಯಮ, ಫೋಟೊ ಜರ್ನಲಿಸಂ, ಫ್ಯಾಶನ್ ಡಿಸೈನಿಂಗ್, ಅಪರಾಧ ಶಾಸ್ತ್ರ ಮತ್ತು ನ್ಯಾಯಿಕ ವೈದ್ಯಶಾಸ್ತ್ರ, ಮಾಧ್ಯಮ ಅಧ್ಯಯನ, ದೂರ ಶಿಕ್ಷಣ, ಆಹಾರ ಸಂಸ್ಕರಣೆ, ಮತ್ಸ್ಯೋದ್ಯಮ, ಹರಳು ಮತ್ತು ಆಭರಣ ವಿನ್ಯಾಸ... ಮುಂತಾದವು ವಿದ್ಯಾರ್ಥಿಗಳಿಗೆ ಪ್ರಿಯವಾಗುತ್ತಿವೆ. ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳು ತಮ್ಮ ವ್ಯಾಪ್ತಿಯ ಕಾಲೇಜುಗಳಲ್ಲಿ ಕಲೆ, ವಾಣಿಜ್ಯ, ವಿಜ್ಞಾನ, ಲಲಿತ ಕಲೆ, ದೃಶ್ಯ ಕಲೆ, ಮುದ್ರಣ, ಮಾಹಿತಿ ತಂತ್ರಜ್ಞಾನ, ಅನ್ವಯಿಕ ವಿಷಗಳಲ್ಲಿ ಡಿಪ್ಲೊಮಾ, ಪದವಿ, ಸ್ನಾತಕೋತ್ತರ ಪದವಿ, ಸ್ನಾತಕೋತ್ತರ ಡಿಪ್ಲೊಮಾ, ಸಂಶೋಧನೆ, ಡಾಕ್ಟರೇಟ್ ಸೇರಿದಂತೆ ನಾನಾ ರೀತಿಯ ಅಧ್ಯಯನಕ್ಕೆ ಅವಕಾಶ ನೀಡಿವೆ. (ಗಮನಿಸಿ-ಆಯಾ ವಿ.ವಿ.ಗಳ ಅಂತರ್ಜಾಲ)
ರಾಜ್ಯದಲ್ಲಿರುವ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಹಾಗೂ ಅಧ್ಯಯನ ಕೇಂದ್ರಗಳಲ್ಲಿ ಕೃಷಿ, ತೋಟಗಾರಿಕೆ, ಕೃಷಿ ಎಂಜಿನಿಯರಿಂಗ್, ಡೈರಿ ಟೆಕ್ನಾಲಜಿ, ಬಯೊ ಟೆಕ್ನಾಲಜಿ, ಅರಣ್ಯ ಶಾಸ್ತ್ರ, ಆಹಾರ ವಿಜ್ಞಾನ, ಮೀನು ಮತ್ತು ನೀರಿನ ಜೀವಿಗಳ ವಿಜ್ಞಾನ, ಗೃಹ ವಿಜ್ಞಾನ, ರೇಷ್ಮೆ ಕೃಷಿ, ಕೃಷಿ ಉತ್ಪನ್ನ ಮಾರಾಟ, ಬ್ಯಾಂಕಿಂಗ್ ಮತ್ತು ಸಹಕಾರ, ವಾಣಿಜ್ಯ ಕೃಷಿ ಮತ್ತು ವ್ಯವಹಾರ ನಿರ್ವಹಣೆ ಮುಂತಾದ ವಿಷಯಗಳಲ್ಲಿ ಬಿ.ಎಸ್ಸಿ., ಬಿ.ಟೆಕ್, ಬಿ.ಇ.ಎಸ್ಸಿ, ಪದವಿ ಮತ್ತು ಸ್ನಾತಕೋತ್ತರ ಪದವಿ ತರಗತಿಗಳನ್ನು, ಸಂಶೋಧನೆಗಳನ್ನು ಮಾಡಬಹುದಾಗಿದೆ. (ಗಮನಿಸಿ-www.uasbanglore.edu.in & www.icar.org.in ) ಇದರ ಜೊತೆಗೆ ಪಶು ವೈದ್ಯಕೀಯ ರಂಗಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಸಕ್ತಿ ತೋರುತ್ತಿದ್ದಾರೆ. (ಗಮನಿಸಿ-  www.kvafsc.nic.in )
ಅರೆ ವೈದ್ಯಕೀಯ ಕೋರ್ಸ್‌ಗಳು, ಅದರಲ್ಲೂ ಲ್ಯಾಬ್ ಟೆಕ್ನೀಷಿಯನ್,   ಎಕ್ಸ್‌ರೇ ಟೆಕ್ನೀಷಿಯನ್, ನರ್ಸಿಂಗ್ ಕೋರ್ಸ್‌ಗಳಿವೆ. ಕಂಪ್ಯೂಟರ್ ಮಾಯಾಲೋಕದಲ್ಲಿ ಸಾಕಷ್ಟು ಅವಕಾಶಗಳಿವೆ. ಯುವಜನ ಆ್ಯನಿಮೇಶನ್ ಹಾಗೂ ಗ್ರಾಫಿಕ್ ಡಿಸೈನಿಂಗ್‌ನತ್ತ ಹೆಚ್ಚು ವಾಲುತ್ತಿದ್ದಾರೆ.
ಪಾಲಕರೇ ಯೋಚಿಸಿ
ಸಾಹಿತ್ಯ, ಸಂಗೀತ, ಕಲೆ, ನಾಟಕ, ನೃತ್ಯ, ಕುಶಲ ಕಲೆಗಳಲ್ಲಿ ಆಸಕ್ತಿ ಇರುವ ಮಕ್ಕಳಿಗೆ ಪೋಷಕರು ಬಲವಂತವಾಗಿ ಮತ್ತಾವುದೋ ಕೋರ್ಸಿಗೆ ಸೇರಿಸಿದಾಗ ಕೆಲವರು ಮಾತ್ರ ಎರಡರಲ್ಲೂ ಸೈ ಎನಿಸಿಕೊಳ್ಳುತ್ತಾರೆ. ಆದರೆ ಬಹುತೇಕರು ವಿಫಲರಾದ ಉದಾಹರಣೆಗಳಿವೆ.
ವಿದ್ಯಾರ್ಥಿಗಳಿಗೆ ಹಿರಿಯರು ಹಲವು ಬಗೆಯ ಆಯ್ಕೆಗಳ ಬಗ್ಗೆ ಮಾಹಿತಿ ನೀಡಬೇಕು. ವಿದ್ಯಾರ್ಥಿಗಳು ಅಗತ್ಯವಾದಲ್ಲಿ ತಜ್ಞರ ಅಥವಾ ಆ ಕ್ಷೇತ್ರದಲ್ಲಿ ಸಾಧನೆ ಮಾಡಿದವರ ಬಳಿ ಮಾರ್ಗದರ್ಶನ ಪಡೆಯಬೇಕು. ಸಾಧ್ಯವಾದರೆ ಆಪ್ತ ಸಮಾಲೋಚಕರ, ಮನೋವೈದ್ಯರ ಸೇವೆಯನ್ನು ಪಡೆಯಬಹುದು.
ಬಹಳ ಮುಖ್ಯವಾಗಿ, ಪೋಷಕರು ತಮಗೆ ಇಷ್ಟವಾಗುವ ಅಥವಾ ಒಣ ಪ್ರತಿಷ್ಠೆ ತೋರಿಸುವ ಸಲುವಾಗಿ `ಇದನ್ನೇ ಓದು' ಎಂದು ಮಕ್ಕಳ ಮೇಲೆ ಒತ್ತಡ ಹೇರಬಾರದು. ಅದಕ್ಕೆ ಬದಲಾಗಿ ಮಕ್ಕಳ ಜೊತೆ ಮುಕ್ತ ಮಾತುಕತೆ ನಡೆಸಿ, ಅವರಿಗೆ ಆಸಕ್ತಿಯುಳ್ಳ ಕೋರ್ಸ್‌ನ್ನೇ ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಬೇಕು. ಆಗ ಮಕ್ಕಳ ಮನೋಸಾಮರ್ಥ್ಯ ಹೆಚ್ಚಾಗುವುದಲ್ಲದೆ, ಅವರು ಸಾಧನೆಯ ಹಾದಿಯಲ್ಲಿ ಸಾಗುತ್ತಾರೆ.
Supporting Image: 
This is an article from newspaper Deccan Herald appeared on May 13, 2013 in page 1. Click the following link to read : http://prajavaniepaper.com/svww_showarticle.php?art=20130513p_001100001